
ಕುಂದಾಪುರ, ಸೆ.13 : ಕಮಲಶಿಲೆ – ಸಿದ್ದಾಪುರ ಮುಖ್ಯರಸ್ತೆಯ ತಾರೆಕುಡ್ಡು ಬಳಿ ನಡೆದ ದುರಂತದಲ್ಲಿ ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (22) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹ ಸವಾರ ವಿಪ್ಪೇಶ್ (19) ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಏಕಾಏಕಿ ದೊಡ್ಡ ಕಡವೆ ಬೈಕ್ಗೆ ಅಡ್ಡ ಬಂದಿದ್ದು, ಢಿಕ್ಕಿ ಹೊಡೆದ ಪರಿಣಾಮ ಬೈಕ್ ಪಲ್ಟಿಯಾಗಿ ನುಜ್ಜುಗುಜ್ಜಾಗಿದೆ. ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ.
ಗಾಯಗೊಂಡ ವಿಪ್ಪೇಶ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಶ್ರೇಯಸ್ ನೆಲ್ಲಿಕಟ್ಟೆ ಸುರೇಶ್ ಮೊಗವೀರ ಮತ್ತು ಯಶೋದಾ ದಂಪತಿಯ ಪುತ್ರ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಶ್ರೇಯಸ್ ಇತ್ತೀಚೆಗೆ ಊರಿಗೆ ಬಂದಿದ್ದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಂಡ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು, ಡಿಎಫ್ಒ ಗಣಪತಿ, ಆರ್ಎಫ್ಒ ಜ್ಯೋತಿ ಮೊದಲಾದವರು ಮೃತರ ಮನೆಯಲ್ಲಿ ಭೇಟಿ ನೀಡಿ ಸಾಂತ್ವನ ಸೂಚಿಸಿದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









