
ಶಿವಮೊಗ್ಗ, ಸೆ.12 : ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ಫಿಕ್ಸ್ ಆಗಿದ್ದ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತರು ಸೊರಬ ತಾಲೂಕು ಗಂಗವಳ್ಳಿ ಗ್ರಾಮದ ಬಸವನಗೌಡ ಮತ್ತು ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ರೇಖಾ ಎಂದು ಗುರುತಿಸಲ್ಪಟ್ಟಿದ್ದಾರೆ. ಇವರ ಮದುವೆ ನಿಗದಿಯಾಗಿತ್ತು.
ಇಬ್ಬರೂ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕಾಗಿ ಮತ್ತಿಕೋಟೆಯಿಂದ ಹೊರಟಿದ್ದು, ಅಂಬಾರಗೊಪ್ಪ ಕ್ರಾಸ್ ಬಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಎದುರಿನಿಂದ ಬಂದ ಇಕೋ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತರಾಗಿದ್ದಾರೆ.
ಘಟನೆಯ ಬಳಿಕ ಇಬ್ಬರ ಕುಟುಂಬಗಳಲ್ಲಿ ಆಕ್ರಂದನ ಮೂಡಿದ್ದು, ಮದುವೆ ಸಂಭ್ರಮವಾಗಬೇಕಾದ ಮನೆಗಳಲ್ಲಿ ಅಳಲು ಆವರಿಸಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









