
ಪುತ್ತೂರು: ಕೊಡಿಪ್ಪಾಡಿ ಗ್ರಾಮವನ್ನು ಉಪ್ಪಿನಂಗಡಿ ಹೋಬಳಿಯಿಂದ ಬೇರ್ಪಡಿಸಿ ಪುತ್ತೂರು ಹೋಬಳಿಗೆ ಸೇರಿಸುವುದಾಗಿ ಶಾಸಕ ಅಶೋಕ್ ರೈ ಭರವಸೆ ನೀಡಿದರು.
ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಗ್ರಾಮಸ್ಥರು ಹೋಬಳಿ ಬದಲಾವಣೆಗೆ ಮನವಿ ಮಾಡಿದ್ದಾರೆ. ಕೊಡಿಪ್ಪಾಡಿಗೆ ಪುತ್ತೂರು ಹತ್ತಿರವಾಗಿದ್ದು, ಉಪ್ಪಿನಂಗಡಿ ದೂರದಲ್ಲಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕಂದಾಯ ಸಂಬಂಧಿ ಕಾರ್ಯಗಳಿಗೂ ಉಪ್ಪಿನಂಗಡಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕೊಡಿಪ್ಪಾಡಿ ಪುತ್ತೂರು ಹೋಬಳಿಗೆ ಸೇರಲಿದೆ” ಎಂದು ಹೇಳಿದರು.
ಅಲ್ಲದೆ, ಈಗ ಪಾಣಾಜೆ ಕೇಂದ್ರಿತವಾಗಿರುವ ಆರೋಗ್ಯ ಕೇಂದ್ರವನ್ನೂ ಪುತ್ತೂರಿಗೆ ಬದಲಾಯಿಸಲಾಗುವುದು ಎಂದು ಶಾಸಕರು ತಿಳಿಸಿದರು. ಇದು ಕೊಡಿಪ್ಪಾಡಿ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದು, ಈಗ ಅದು ಈಡೇರಲಿದೆ.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಸೋಮಪ್ಪ ಪೂಜಾರಿ, ಇಒ ನವೀನ್ ಭಂಡಾರಿ, ಉಪಾಧ್ಯಕ್ಷೆ ರೇಖಾ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.






