
ಪುತ್ತೂರು:ಕರ್ನಾಟಕ ರಾಜ್ಯ ಸರಕಾರವು ಅನ್ನಭಾಗ್ಯ ಯೋಜನೆಯಡಿ “ಇಂದಿರಾ ಕಿಟ್” ವಿತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಬಡ ಜನತೆಗೆ ನೆಮ್ಮದಿ ಮತ್ತು ಆಶಾದೀಪವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶಾಸಕರು ಗುರುವಾರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದರು – “ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಹಾಗೂ ಅತಿ ಪ್ರಮಾಣದ ಅಕ್ಕಿ ವ್ಯರ್ಥವಾಗುತ್ತಿರುವ ವಿಚಾರ ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಅದನ್ನು 5 ಕೆ.ಜಿಗೆ ಇಳಿಸಿ, ಅದರ ಬದಲಿಗೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ಇಂದಿರಾ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಈ ಕ್ರಮ ಅತ್ಯುತ್ತಮ ಮತ್ತು ಜನಪರವಾಗಿದೆ” ಎಂದು ಹೇಳಿದರು.
ಇಂದಿರಾ ಕಿಟ್ನಲ್ಲಿ ದೊರೆಯುವ ವಸ್ತುಗಳು:
➡️ 2 ಕೆ.ಜಿ ತೊಗರಿ ಬೇಳೆ
➡️ 1 ಲೀಟರ್ ಅಡುಗೆ ಎಣ್ಣೆ
➡️ 1 ಕೆ.ಜಿ ಸಕ್ಕರೆ
➡️ 1 ಕೆ.ಜಿ ಉಪ್ಪು
ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಜನತೆಗೆ ಈ ಕಿಟ್ ಹೊಸ ಆಶಾದೀಪವನ್ನು ನೀಡಲಿದೆ ಎಂದು ಶಾಸಕ ಅಶೋಕ್ ರೈ ಅಭಿಪ್ರಾಯಪಟ್ಟರು. “ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಬಡವರ ಪರವಾದ ನಿಜವಾದ ನಿಷ್ಠೆಯ ನಿದರ್ಶನವಾಗಿದೆ. ಕಾಂಗ್ರೆಸ್ ಎಂದೆಂದೂ ಬಡವರ ಪರ ನಿಂತ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ,” ಎಂದು ಅವರು ಹೇಳಿದರು.






