
ಪುತ್ತೂರು, ನ. 8: ಮಾನ್ಯ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಯೊಬ್ಬನಿಗೆ ಜಾಮೀನು ದೊರಕುವಂತೆ ಮಾಡಿ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದ ಜಮೀನಿನ ಆರ್ಟಿಸಿಯನ್ನು ತನ್ನದೇ ಜಮೀನಿನ ದಾಖಲೆ ಎಂದು ಬಿಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಯೊಬ್ಬನಿಗೆ ಜಾಮೀನು ದೊರಕಿಸಿಕೊಡುವಂತೆ ಮಾಡಿ ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 84/2025, ಕಲಂ 417, 419, 467, 468, 471 ಐಪಿಸಿಯಡಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ನಕಲಿ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಭದ್ರತಾ ಪತ್ರ ಸಲ್ಲಿಸಿ, ವಂಚನೆಗೆ ಯತ್ನಿಸಿದ ಅಬ್ದುಲ್ ಹಾಶೀಮ್ (34),
ವಾಸ: ಪಡುವನ್ನೂರು ಗ್ರಾಮ, ಪುತ್ತೂರು ಎಂಬಾತನನ್ನು 06.11.2025 ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.






