ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ನಡೆದಿದ್ದ ವೃದ್ಧೆಯ ಚಿನ್ನ ಕಳ್ಳತನ (crime) ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ತಮಿಳುನಾಡು (Tamil Naidu) ಮೂಲದ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶೀಥಲ್, ಕಾಳಿಯಮ್ಮ ಹಾಗೂ ಮಾರಿಯಮ್ಮ ಎಂದು ಗುರುತಿಸಲಾಗಿದೆ. ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವದ ವೇಳೆ ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನ ಎಗರಿಸಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ದೃಶ್ಯಾವಳಿಗಳನ್ನು ಆಧರಿಸಿ ಉಡುಪಿ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದರು. ಪರಿಶೀಲನೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಮಹಿಳಾ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನಸಂದಣಿ ಇರುವ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಕಳ್ಳತನ ನಡೆಸುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಬಂಧಿತರಿಂದ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಏನಿದು ಘಟನೆ..?

ಪೂಜೆಯ ನೆಪದಲ್ಲಿ ದೇವಾಲಯಕ್ಕೆ ಆಗಮಿಸಿದ ಕಳ್ಳಿಯ ಗ್ಯಾಂಗ್‌ ವೃದ್ಧೆಯನ್ನು ಟಾರ್ಗೆಟ್‌ ಮಾಡಿ, ಯಾಮಾರಿಸಿ ಚಿನ್ನದ ಸರವನ್ನು ಕದ್ದಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ. ಕಳ್ಳಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿದ್ದಾರೆ. ಮೊದಲಿಗೆ ಪೂಜೆಯ ನೆಪದಲ್ಲಿ ಆಗಮಿಸಿದ್ದ ಕಳ್ಳಿಯರು ಅಲ್ಲೇ ಇದ್ದ ಒಂಟಿ ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರಕ್ಕಾಗಿ ಹೊಂಚು ಹಾಕಿದ್ದಾರೆ.

ಪೂಜೆ ಪ್ರಾರಂಭವಾಗುತ್ತಿದ್ದಂತೆ ಕುಳಿತಿದ್ದ ವೃದ್ಧೆ ಎದ್ದು ನಿಂತಾಗ ಆಕೆಯನ್ನು ಗೋಡೆ ಬಳಿಗೆ ಕರೆದುಯ್ದು, ಮೂರೂ ಬದಿಯಿಂದ ಆಕೆಯನ್ನು ಸುತ್ತುವರಿದು, ಚಿನ್ನದ ಸರವನ್ನು ಎಗರಿಸಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.
ವೃದ್ಧೆ ಹೆಜಮಾಡಿ ನಿವಾಸಿ ಕಮಲ ಎಂದು ತಿಳಿದು ಬಂದಿದ್ದು, ಪೂಜೆಯ ಗಂಟೆಯ ಸದ್ದಿನಿಂದಾಗಿ ಆಕೆ ಸಹಾಯಕ್ಕಾಗಿ ಕಿರುಚಾಡಿದರೂ ಯಾರಿಗೂ ಕೇಳಿಸಿಲ್ಲ.

ನಂತರ ವೃದ್ಧೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ಕಳ್ಳಿಯರನ್ನು ಪತ್ತೆ ಹಚ್ಚಲು ಕೆಲಸ ಮಾಡುತ್ತಿದ್ದಾರೆ. ಕಳ್ಳಿಯರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕದ್ದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!