
ಡಿಜಿಪಿ ರಾಮಚಂದ್ರ ರಾವ್ (DGP Ramachandra Rao Case) ಅವರ ರಾಸಲೀಲೆಯ ವಿಡಿಯೊ ಬೆನ್ನಲ್ಲೇ ಇದೀಗ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಯ್, ಗುಡ್ ಮಾರ್ನಿಂಗ್… ಯಾಕೆ ಫೋನ್ ಪಿಕ್ ಮಾಡಿಲ್ಲ.
ಲವ್ ಯೂ ಬಂಗಾರಿ, ಸೋ ಸ್ವೀಟ್, ದಿನಾಲೂ ನಿನ್ನ ನೋಡಬೇಕು, ಮುದ್ದು ಮಾಡಬೇಕು … ಎಂದೆಲ್ಲಾ ರೊಮ್ಯಾಂಟಿಕ್ ಆಗಿ ಮಹಿಳೆ ಜತೆ ಅಶ್ಲೀಲವಾಗಿ ಡಿಜಿಪಿ ಮಾತನಾಡಿರುವುದು ಆಡಿಯೊದಲ್ಲಿದೆ.
ಇದಕ್ಕೂ ಮುನ್ನಾ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಿರಿಯ ಐಪಿಎಸ್ ಅಧಿಕಾರಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ದೌಡಾಯಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಮಚಂದ್ರರಾವ್, ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಎಂದು ಅವರು ಆರೋಪಿಸಿದ್ದರು. ನಾನು ಕೂಡ ಆ ವಿಡಿಯೋವನ್ನು ನೋಡಿದ್ದೇನೆ. ಅದು ಎಐ ಬಳಸಿ ಸೃಷ್ಟಿಸಿದ ವಿಡಿಯೊ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಷಡ್ಯಂತ್ರ ನಡೆದಿದೆ. ಈ ಬಗ್ಗೆ ದೂರು ದಾಖಲಿಸುತ್ತೇನೆ ಎಂದು ಹೇಳಿದ್ದರು.
ಡಿಜಿಪಿ ವಿರುದ್ಧ ದೂರು
ಅಶ್ಲೀಲ ವಿಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಡಿಜಿಪಿ ರಾಮಚಂದ್ರರಾವ್ ವಿರುದ್ಧ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಕಾರ್ಯದರ್ಶಿಗೆ ದೂರು ನೀಡಲಾಗಿದೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ. ಈ ಕೂಡಲೇ ರಾಮಚಂದ್ರರಾವ್ರನ್ನು ಅಮಾನತು ಮಾಡಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸೂಚನೆ
ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ (DGP Ramachandra Rao Case) ಸಂಬಂಧಿಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಮಚಂದ್ರರಾವ್ ತನ್ನ ಕಚೇರಿಯಲ್ಲೇ ಮಹಿಳೆಯರ ಜತೆ ಸರಸವಾಡಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಇನ್ನು ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಅವರು, ನನಗೆ ಈ ವಿಚಾರ ಬೆಳಗ್ಗೆ ಗೊತ್ತಾಯಿತು. ನಾವು ಈ ಪ್ರಕರಣದ ಬಗ್ಗೆ ತನಿಖೆ ಮಾಡಿಸಿ, ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ಉನ್ನತ ಅಧಿಕಾರಿಯಾದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.






