
ಪುತ್ತೂರು: ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಜನಪ್ರಿಯ ವೈದ್ಯ ಡಾ. ಸುರೇಶ್ ಪುತ್ತೂರಾಯ ಹಾಗೂ ಅವರ ಪತ್ನಿ ಡಾ. ಆಶಾ ಪುತ್ತೂರಾಯ ಅವರನ್ನು ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ ಅವರು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ ಪಿ. ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ತಕ್ಕಂತೆ ಡಾ. ಸುರೇಶ್ ಪುತ್ತೂರಾಯರು ತಮ್ಮ ವೈದ್ಯ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಪ್ರತೀ ತಿಂಗಳು ಉಚಿತ ವೈದ್ಯಕೀಯ ಶಿಬಿರ ಹಾಗೂ ಔಷಧಿ ವಿತರಣೆಯ ಮೂಲಕ ಬಡಜನರಿಗೆ ನೆರವಾಗುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಬಡವರ ಪಾಲಿನ ಆಪತ್ಕಾಂದವ
ದಿವಾಕರ ದಾಸ್ ನೇರ್ಲಾಜೆ ಮಾತನಾಡಿ, ಡಾ. ಸುರೇಶ್ ಪುತ್ತೂರಾಯರು ಬಡವರ ಪಾಲಿನ ಆಪತ್ಕಾಂದವರಾಗಿದ್ದಾರೆ. ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಕರೆದರೆ ತಕ್ಷಣ ಸ್ಪಂದಿಸುವ ವ್ಯಕ್ತಿತ್ವ ಅವರದು. ತಮ್ಮ ಮನೆಯ ಸದಸ್ಯರಿಗೆ ತಡರಾತ್ರಿ ತುರ್ತು ಚಿಕಿತ್ಸೆ ನೀಡುವ ಮೂಲಕ ಪ್ರಾಣ ಉಳಿಸಿದ ಅನುಭವವನ್ನು ಹಂಚಿಕೊಂಡು, ಆ ಕೃತಜ್ಞತೆಯ ಸಂಕೇತವಾಗಿ ಈ ಸನ್ಮಾನ ಮಾಡಲಾಗಿದೆ ಎಂದರು. ಅವರ ಸೇವೆ ಇನ್ನಷ್ಟು ಜನರಿಗೆ ಸಿಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿ ಪ್ರೀತಂ ಪುತ್ತೂರಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ ಬೈಲಾಡಿ, ಕೃಷ್ಣ ಭಟ್, ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ರವಿನಾಥ ಗೌಡ ಬೈಲಾಡಿ, ನವೀನ್ ಕುಕ್ಕಾಡಿ, ಹರಿಣಿ ಪುತ್ತೂರಾಯ, ಉದಯ ಕುಮಾರ್ ಬಲ್ಲಾಳ್, ನಹುಷ ಪಿ.ವಿ., ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನ್ನಾ ಅಚ್ಚುತ ಮೂಡೆತ್ತಾಯ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು






