
ನಾಪತ್ತೆ ಪ್ರಕರಣವೆಂದು ಭಾರೀ ಸಂಚಲನ ಸೃಷ್ಟಿಸಿದ್ದ ಘಟನೆಗೆ ಇದೀಗ ಹೊಸ ತಿರುವು ಸಿಕ್ಕಿದೆ. ನಾಪತ್ತೆಯಾಗಿದ್ದ ಪ್ರಿಯಾಂಕ ಪ್ರಿಯಕರ ಡೇವಿಡ್ ಜೊತೆ ತೆರಳಿ, ಕೊಲೆ ಶಂಕೆ ಹುಟ್ಟುವಂತೆ ಸುಳ್ಳು ಸನ್ನಿವೇಶ ಸೃಷ್ಟಿಸಿದ್ದುದು ತನಿಖೆಯಲ್ಲಿ ಬಹಿರಂಗವಾಗಿದೆ.
ಫೆಬ್ರವರಿ ಹನ್ನೆರಡರಂದು ಪ್ರಿಯಾಂಕ ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ತೆರಳಿದ್ದಳು.
ಬಳಿಕ ಸಂಪರ್ಕಕ್ಕೆ ಸಿಗದೆ ಆತಂಕ ಉಂಟಾಗಿತ್ತು. ಫೆಬ್ರವರಿ ಹದಿನಾಲ್ಕರಂದು ಕಲ್ಕೆರೆ ಕೆರೆ ಬಳಿ ಆಕೆಯ ಬಟ್ಟೆ, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಕೊಲೆ ಶಂಕೆ ತೀವ್ರಗೊಂಡಿತ್ತು.
ಪೊಲೀಸರು ತನಿಖೆ ಚುರುಕುಗೊಳಿಸಿದಾಗ, ಪ್ರಿಯಾಂಕ ತನ್ನ ಪ್ರಿಯಕರ ಡೇವಿಡ್ ಜೊತೆ ಕುಣಿಗಲ್ ಕಡೆ ತೆರಳಿರುವುದು ತಿಳಿದುಬಂತು. ಅದೇ ರಾತ್ರಿ ಡೇವಿಡ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಆಕೆ ಜೀವಂತವಾಗಿ ಪತ್ತೆಯಾದಳು. ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಮುಂದಾಳತ್ವದಲ್ಲಿ ಪ್ರಿಯಾಂಕನನ್ನು ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು. ಪತಿ ರುದ್ರೇಶ್ ಅಲ್ಲಿಗೆ ಆಗಮಿಸಿ ಮಾತುಕತೆ ನಡೆಸಿದರು. ಆರಂಭದಲ್ಲಿ ಗಂಡನ ಜೊತೆ ಹೋಗಲು ನಿರಾಕರಿಸಿದ್ದ ಪ್ರಿಯಾಂಕ, ಸುಮಾರು ಒಂದೂವರೆ ಗಂಟೆಗಳ ಚರ್ಚೆಯ ಬಳಿಕ ಮನಸ್ಸು ಬದಲಿಸಿಕೊಂಡಿದ್ದಾಳೆ.
ಕುಟುಂಬ ಮತ್ತು ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ರುದ್ರೇಶ್ ಪತ್ನಿಯ ತಪ್ಪನ್ನು ಮನ್ನಿಸಿ ಮತ್ತೆ ಜೊತೆಯಾಗಿ ಬದುಕಲು ಸಮ್ಮತಿಸಿದ್ದಾರೆ. ಕೊನೆಗೆ ಸಾಂತ್ವಾನ ಕೇಂದ್ರದಿಂದ ತವರು ಮನೆಗೆ ತೆರಳಿದ ಪ್ರಿಯಾಂಕ, ಅಲ್ಲಿಂದ ಗಂಡನ ಮನೆ ಸೇರಲು ನಿರ್ಧರಿಸಿದ್ದಾಳೆ.







