ಮಂಗಳೂರು: ಅಂತರ್‌ರಾಜ್ಯ ಗಾಂಜಾ ಮಾರಾಟ ಜಾಲವನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು 22 ಕೆಜಿ 250 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಸಮೀಪ ಗಾಂಜಾವನ್ನು ಮಾರಾಟ ಮಾಡಲು ಹೊರರಾಜ್ಯದಿಂದ ತರಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.
ಬಂಧಿತರನ್ನು ಕರಣ್ ಬಾಬು ರಾಂ ಜಾದವ್ (27), ಸಮತಾ ನಗರ, ಚೊಪ್ಪಡ ತಾಲೂಕು, ಜಲಗಾಂ ಜಿಲ್ಲೆ, ಮಹಾರಾಷ್ಟ್ರ; ಸಮೀರ್ ಶಾ (19), ದೇವಾಸ್ ಜಿಲ್ಲೆ, ಮಧ್ಯಪ್ರದೇಶ; ಎಂ.ಹೆಚ್. ಮಯ್ಯದಿ (48), ಹೆಜಮಾಡಿ ಕೋಡಿ, ಉಡುಪಿ ಜಿಲ್ಲೆ; ಹಾಗೂ ಇಬ್ರಾಹಿಂ ಕಲೀಲ್ (47), ಕುದ್ರೋಳಿ, ಮಂಗಳೂರು (ಪ್ರಸ್ತುತ ಕಾವೂರು ನಿವಾಸಿ) ಎಂದು ಗುರುತಿಸಲಾಗಿದೆ.
ಆರೋಪಿತರ ವಶದಿಂದ 22 ಕೆಜಿ 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500), 6 ಮೊಬೈಲ್ ಫೋನ್‌ಗಳು (ರೂ. 18,000) ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ KA-20-HE-2915 ಮತ್ತು KA-19-HP-6021 ಸಂಖ್ಯೆಯ ಸ್ಕೂಟರ್‌ಗಳು (ರೂ. 1,00,000) ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ರೂ. 12,30,500 ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕರಣ್ ಜಾದವ್ ಮತ್ತು ಸಮೀರ್ ಶಾ ಅವರು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ಗಾಂಜಾವನ್ನು ಪಡೆದು ಉಡುಪಿ ಜಿಲ್ಲೆಯ ಹೆಜಮಾಡಿಯ ಮಯ್ಯದಿ ಹಾಗೂ ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ಪೂರೈಕೆ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಇವರಿಬ್ಬರು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು ಹಾಗೂ ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದರೆಂದು ಮಾಹಿತಿ ದೊರೆತಿದೆ. ಈ ಹಿಂದೆ ಸಹ ಹಲವು ಬಾರಿ ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 21/2026ರಲ್ಲಿ ಎನ್‌ಡಿಪಿಎಸ್ ಕಾಯ್ದೆ ಕಲಂ 8(C), 20(b)(ii)(C) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!