
ಇ ರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷದಿಂದ ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿ (LPG crisis) ಉಂಟಾಗಿರುವ ವ್ಯತ್ಯಯ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರದ ಕ್ರಮ ಎಲ್ಪಿಜಿ ಉತ್ಪಾದನೆಗೆ ಆದ್ಯತೆ ನೀಡುತ್ತದೆ ಹಾಗೂ ತೈಲ ಮಾರುಕಟ್ಟೆ ಕಂಪನಿಗಳಿಂದ ಸರಬರಾಜು ಮಾಡಲಾದ ಎಲ್ಪಿಜಿ ಅನ್ನು ದೇಶೀಯ ಗ್ರಾಹಕರಿಗೆ ಮಾತ್ರ ಮಾರಾಟ ಮಾಡಬೇಕೆಂದು ನಿರ್ದೇಶಿಸುತ್ತದೆ. ದೇಶಾದ್ಯಂತ ಮನೆಗಳಿಗೆ ನಿರಂತರ ಎಲ್ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಆದೇಶ ಪ್ರಶಂಸನಾರ್ಹ. ಆದರೆ, ಇದರ ಅನುಷ್ಠಾನವು ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿಯ ಅನಿರೀಕ್ಷಿತ ಕೊರತೆಗೆ ಕಾರಣವಾಗಿದೆ. ನಗರದ ಹಲವಾರು ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸದಿದ್ದರೆ ಅವರು ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಬಹುದು ಎಡನು ತಿಳಿಸಿದ್ದಾರೆ.
ರಾಜ್ಯದ ವಾಣಿಜ್ಯ ಎಲ್ಪಿಜಿ ಬೇಡಿಕೆಯನ್ನು ಸಾಂಪ್ರದಾಯಿಕವಾಗಿ ಮೂರು OMCS-IOCL (ದಿನಕ್ಕೆ ಸುಮಾರು 500-550 MT), HPCL (ದಿನಕ್ಕೆ ಸುಮಾರು 300 MT) ಮತ್ತು BPCL (ದಿನಕ್ಕೆ ಸುಮಾರು 230 MT) ಪೂರೈಕೆ ಮಾಡುತ್ತಿದ್ದವು. ಈ ಪೂರೈಕೆಯಲ್ಲಿನ ಹಠಾತ್ ಅಡಚಣೆಯು ಈಗ ಬೆಂಗಳೂರಿನ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ವಾಣಿಜ್ಯ ಬಳಕೆದಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅವುಗಳ ಕಾರ್ಯನಿರ್ವಹಣೆಗೆ ಯಾವುದೇ ಅಡಚಣೆ ಉಂಟಾದರೆ ಅದು ನಗರದ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯುಹೋಟೆಲ್ಗಳು ಮತ್ತು ಮೆಸ್ಗಳನ್ನು ಅವಲಂಬಿಸಿರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರ ಮೇಲೂ ಪರಿಣಾಮ ಬೀರುತ್ತದೆ. ಇದರ ಜತೆಗೆ, ಆಹಾರ ತಯಾರಿಕೆಗಾಗಿ ವಾಣಿಜ್ಯ ಎಲ್ಪಿಜಿ ಅನ್ನು ಅವಲಂಬಿಸಿರುವ ಛತ್ರಗಳು (ಮದುವೆ ಸಭಾಂಗಣಗಳು), ಹಾಸ್ಟೆಲ್ಗಳು ಮತ್ತು ಕಾರ್ಯಕ್ರಮದ ಸ್ಥಳಗಳು ಸಹ ಅನಿಶ್ಚಿತತೆಯನ್ನು ಎದುರಿಸುತ್ತಿವೆ.
ಹೀಗಾಗಿ ಬೆಂಗಳೂರಿನಂತಹ ಮಹಾನಗರದಲ್ಲಿ ವಾಣಿಜ್ಯ ಎಲ್ಪಿಜಿ ಮೇಲಿನ ಅವಲಂಬನೆಯ ಪ್ರಮಾಣವನ್ನು ಗಮನಿಸಿದರೆ, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಛತ್ರಗಳು, ಸಮುದಾಯ ಸಭಾಂಗಣಗಳು ಮತ್ತು ಯಾವುದೇ ಇತರ ವಾಣಿಜ್ಯ ಸಂಸ್ಥೆಗಳಿಗೆ ಸಾಕಷ್ಟು ವಾಣಿಜ್ಯ ಎಲ್ಪಿಜಿ ಪೂರೈಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಕೇಂದ್ರವು ತುರ್ತು ಹಸ್ತಕ್ಷೇಪ ಮಾಡಲು ವಿನಂತಿಸುತ್ತೇನೆ. ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಕ್ತ ನಿರ್ದೇಶನಗಳು ಪರಿಸ್ಥಿತಿಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಈ ವಿಷಯವನ್ನು ತುರ್ತಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ಪತ್ರದಲ್ಲಿ ಸಿಎಂ ಕೋರಿದ್ದಾರೆ.









