
ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಎಂಜಿನಿಯರಿಂಗ್ ವಿದ್ಯಾರ್ಥಿಯ ತಂದೆ-ತಾಯಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊಯಿನಾಚಿ ಪರಂಬ್ನಲ್ಲಿ ಬೆಳಕಿಗೆ ಬಂದಿದೆ.
ಪೊಯಿನಾಚಿ ಪರಂಬ್ ನಿವಾಸಿಗಳಾದ ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಆತ್ಮಹತ್ಯೆಗೈದವರು. ಶುಕ್ರವಾರ ಬೆಳಗ್ಗೆ ಮನೆಯ ಸೆಂಟ್ರಲ್ ಹಾಲ್ನಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೇಣುಗೋಪಾಲನ್–ಸ್ಮಿತಾ ದಂಪತಿಯ ಏಕೈಕ ಪುತ್ರ ಎಂ. ಶಿವನಂದನ್ (19) ಮಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಡಿ.29ರಂದು ರಾತ್ರಿ ಬೇಕಲದಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದನು.
ಮಗನ ಅಕಾಲಿಕ ಸಾವಿನಿಂದ ದಂಪತಿ ತೀವ್ರವಾಗಿ ನೊಂದಿದ್ದರು. ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಮಯವನ್ನು ಮನೆಯೊಳಗೇ ಕಳೆಯುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.








