ಪುತ್ತೂರು, ಮಾರ್ಚ್ 21: ಆರಂಭಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಪ್ರಮುಖ ಸಂಸ್ಥೆಯಾಗಿರುವ ‘ಯೂರೋಕಿಡ್ಸ್’ (EuroKids) ಪ್ರಿಸ್ಕೂಲ್ ಪುತ್ತೂರಿನ ದರ್ಬೆ (ವಿಶಾಲಾ ಮಾರ್ಟ್ ಎದುರು)ಯಲ್ಲಿ ಶನಿವಾರ ಬೆಳಿಗ್ಗೆ ಉದ್ಘಾಟನೆಯಾಯಿತು.
ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಕೃಷಿಕ ಸುಧಾಮ ಕಕ್ಕಾಜೆ ನೆರವೇರಿಸಿದರು. ತರಗತಿ ಕೊಠಡಿಗಳ ಉದ್ಘಾಟನೆಯನ್ನು ಶ್ರೀ ರಾಮಕೃಷ್ಣ ಶಾಲೆಯ ಪ್ರತಿನಿಧಿ ಹಾಗೂ ಶಿಕ್ಷಣ ತಜ್ಞ ಹೇಮನಾಥ ಶೆಟ್ಟಿ ಕಾವು ನೆರವೇರಿಸಿದರು.
ಅತಿಥಿಗಳಾಗಿ ಸಹಾಯಕ ಆಯುಕ್ತೆ ಹಾಗೂ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ (ಕೆಎಎಸ್), ವಕೀಲ ಮಹೇಶ್ ಕಜೆ, ಶಿಕ್ಷಣ ತಜ್ಞ ಫಾರೂಕ್ ಬಾಯಬೆ, ಸಚಿನ್ ಟ್ರೇಡಿಂಗ್ ಅಂಡ್ ಕೋ. ಮಾಲೀಕ ಮಂಜುನಾಥ ನಾಯಕ್ ಭಾಗವಹಿಸಿದ್ದರು.
25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಯೂರೋಕಿಡ್ಸ್ ಸಂಸ್ಥೆ ದೇಶ–ವಿದೇಶಗಳಲ್ಲಿ 1,700ಕ್ಕೂ ಹೆಚ್ಚು ಕೇಂದ್ರಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 7 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿದೆ. 3 ದೇಶಗಳ 500ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ವಿಸ್ತರಣೆ ಹೊಂದಿರುವ ಸಂಸ್ಥೆ 70ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ.
ಇಲ್ಲಿ ‘ವಿಸಿಬಲ್ ಥಿಂಕಿಂಗ್’ (Harvard Project Zero ಆಧಾರಿತ) ಹಾಗೂ ‘ಹುರೇಕಾ ಕಲಿಕೆ’ ವಿಧಾನಗಳ ಮೂಲಕ ಮಕ್ಕಳಲ್ಲಿ ಆಳವಾದ ಚಿಂತನೆ, ಸಮಸ್ಯೆ ಪರಿಹಾರ ಕೌಶಲ ಮತ್ತು ಆತ್ಮವಿಶ್ವಾಸ ಬೆಳೆಸುವತ್ತ ಒತ್ತು ನೀಡಲಾಗುತ್ತದೆ. ಶಿಕ್ಷಣವನ್ನು ಕೇವಲ ಪಾಠಕ್ಕೆ ಸೀಮಿತಗೊಳಿಸದೇ, ಬೌದ್ಧಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸುರಕ್ಷಿತ ತರಗತಿಗಳು, ವಿಷಕಾರಿಯಲ್ಲದ ಉಪಕರಣಗಳು, ತರಬೇತಿ ಪಡೆದ ಶಿಕ್ಷಕರು ಮತ್ತು ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.
“ಪುತ್ತೂರಿನ ಮಕ್ಕಳು ಕುತೂಹಲ, ಆತ್ಮವಿಶ್ವಾಸ ಹಾಗೂ ಸಂತೋಷದೊಂದಿಗೆ ತಮ್ಮ ಶಿಕ್ಷಣ ಪಯಣವನ್ನು ಆರಂಭಿಸಬೇಕು ಎನ್ನುವುದು ನಮ್ಮ ಆಶಯ,” ಎಂದು ಆಡಳಿತ ಮಂಡಳಿ ತಿಳಿಸಿದೆ.
ಪೋಷಕರು ಹಾಗೂ ಸಾರ್ವಜನಿಕರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.














