ಪುತ್ತೂರು: ಪುತ್ತೂರು ವಾರಿಯರ್ಸ್ ಹಾಗೂ ಸುದ್ದಿ ಅರಿವು ಕೇಂದ್ರದ ಜಂಟಿ ಆಶ್ರಯದಲ್ಲಿ, ಸ್ಪೂರ್ತಿ ಕ್ಯಾಟರಿಂಗ್ ಸರ್ವೀಸ್ ಮತ್ತು ಈವೆಂಟ್ ಆರ್ಗನೈಸರ್ಸ್ ಸಹಯೋಗದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ **‘ಪುತ್ತೂರ ಹಬ್ಬ’**ಕ್ಕೆ ಗುರುವಾರ ಕಿಲ್ಲೆ ಮೈದಾನದಲ್ಲಿ ಚಾಲನೆ ದೊರೆಯಿತು.ಮಾವು, ಹಲಸು, ಸಸ್ಯಜಾತ್ರೆ ಹಾಗೂ ಫುಡ್ ಫೆಸ್ಟಿವಲ್ ಒಳಗೊಂಡ ಈ ಉತ್ಸವದಲ್ಲಿ 70ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿದ್ದು, ವಿವಿಧ ತಳಿಯ ಮಾವು, ಹಲಸು, ಅಪರೂಪದ ಸಸ್ಯಗಳು, ಹೂವಿನ ಹಾಗೂ ಹಣ್ಣಿನ ಗಿಡಗಳು, ಕೃಷಿ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು, ಸಾವಯವ ಉತ್ಪನ್ನಗಳು ಮತ್ತು ವೈವಿಧ್ಯಮಯ ಆಹಾರ ಮಳಿಗೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಮಕ್ಕಳಿಗಾಗಿ ವಿಶೇಷ ಫನ್ಝೋನ್ ಮತ್ತು ಮನರಂಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ.ಉತ್ಸವವನ್ನು ಉದ್ಘಾಟಿಸಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಪ್ರಕೃತಿಯೊಡನೆ ಬೆಸೆದಿರುವ ಈ ಹಬ್ಬ ಪರಿಸರ ಸಂರಕ್ಷಣೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ವಿವಿಧ ಧರ್ಮದವರು ಒಂದಾಗಿ ಆಯೋಜಿಸಿರುವ ಈ ಹಬ್ಬ ಸಾಮರಸ್ಯದ ಸಂಕೇತವಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಮಾಡನ್ನೂರು ಜುಮ್ಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಶಾಂತಿ ಮತ್ತು ಸಾಮರಸ್ಯ ದೇಶದ ಅಭಿವೃದ್ಧಿಗೆ ಅಗತ್ಯವಾಗಿದ್ದು, ಧರ್ಮಗಳು ಮನುಷ್ಯನ ಒಳಿತಿಗಾಗಿವೆ ಎಂದು ಹೇಳಿದರು.ಮಾಯಿದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ಮರ್ವಿನ್ ಪ್ರವೀಣ್ ಲೋಬೋ, ಪುತ್ತೂರ ಹಬ್ಬವು ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ವೇದಿಕೆಯಾಗಿದ್ದು, ಸ್ಥಳೀಯ ಆಹಾರ ಮತ್ತು ಕೃಷಿ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಾರಿಯರ್ಸ್ ಅಧ್ಯಕ್ಷ ಗಿರೀಶ್ ರೈ ಮೂಲೆ, ಕೆಲವರ ಚರ್ಚೆಯಿಂದ ಆರಂಭವಾದ ಕಲ್ಪನೆ ಇಂದು ದೊಡ್ಡ ಉತ್ಸವವಾಗಿ ರೂಪುಗೊಂಡಿದ್ದು, ಸಾರ್ವಜನಿಕರ ಸಹಕಾರದಿಂದ 70ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿವೆ ಎಂದು ತಿಳಿಸಿದರು.ರಜಾಕ್ ಬಪ್ಪಳಿಗೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಂಚನಾ ಹೆಗ್ಡೆ ಪ್ರಾರ್ಥಿಸಿದರು.ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯುವ ಉತ್ಸವದಲ್ಲಿ ಕೃಷಿ, ಆಹಾರ, ಸಸ್ಯಗಳು, ಕೈಮಗ್ಗ, ಸಾವಯವ ಉತ್ಪನ್ನಗಳು ಹಾಗೂ ವಿವಿಧ ಖಾದ್ಯಗಳ ಮಳಿಗೆಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.







