ನೆಲ್ಯಾಡಿ, ಜು.16: ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿ ಅಸ್ವಸ್ಥಗೊಂಡ ಘಟನೆ ಜು.14ರಂದು ನಡೆದಿದೆ.ಅಸ್ವಸ್ಥಗೊಂಡ ಬಾಲಕಿಯನ್ನು ಕೊಕ್ಕಡ ಮಲ್ಲಿಗೆಮಜಲು ಮಸೀದಿ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಫಾತಿಮತ್ ಸಹದಿಯಾ (4) ಎಂದು ಗುರುತಿಸಲಾಗಿದೆ.ಎಂದಿನಂತೆ ಅಂಗನವಾಡಿಗೆ ತೆರಳಿದ್ದ ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಅಂಗನವಾಡಿಯೊಳಗೆ ಜೋಡಿಸಿಟ್ಟಿದ್ದ ಮಕ್ಕಳ ಆಟಿಕೆಗಳ ನಡುವೆ ಅಡಗಿದ್ದ ಹಾವು ಕಚ್ಚಿದೆ. ತಕ್ಷಣ ಬಾಲಕಿ ಜೋರಾಗಿ ಅಳಲಾರಂಭಿಸಿದ್ದು, ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಬಾಲಕಿಯನ್ನು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಬಾಲಕಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.ಘಟನೆ ನಡೆದ ವೇಳೆ ಅಂಗನವಾಡಿ ಶಿಕ್ಷಕಿ ಬಿಎಲ್‌ಒ ಕರ್ತವ್ಯದ ನಿಮಿತ್ತ ಹೊರಗಡೆ ತೆರಳಿದ್ದು, ಕೇಂದ್ರದಲ್ಲಿ ಸಹಾಯಕಿ ಮಾತ್ರ ಕರ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!