ಬಂಟ್ವಾಳ: ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ಪರಿಶೀಲಿಸಿದ ವೇಳೆ ಗಾಂಜಾ ಸೇವಿಸಿರುವ ಆರೋಪದ ಮೇಲೆ ನಾಲ್ವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಆ.9ರಂದು ಸಂಜೆ ಬಂಟ್ವಾಳದ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕದಲ್ಲಿ ಕಾರೊಂದು ಅನುಮಾನಾಸ್ಪದವಾಗಿ ಕಂಡುಬರುತ್ತಿರುವ ಬಗ್ಗೆ ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾಗರಾಜ ಕೆ. (32) ಎಂಬಾತನ ಮನೆಯ ಅಂಗಳದಲ್ಲಿ KA-17-N-7443 ನೋಂದಣಿ ಸಂಖ್ಯೆಯ ಕಾರು ಪತ್ತೆಯಾಗಿದೆ.ಮನೆಯ ಜಗಲಿಯಲ್ಲಿ ನಾಲ್ವರು ಕುಳಿತಿರುವುದು ಕಂಡುಬಂದಿದ್ದು, ವಿಚಾರಣೆ ನಡೆಸಿದಾಗ ಮನೆ ಮಾಲೀಕ ನಾಗರಾಜ ಕೆ., ಕೊಳ್ನಾಡು ನಿವಾಸಿ ಕುಮಾರ್ ಕೃಷ್ಣ (27), ಕೇಪು ನಿವಾಸಿ ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾ ನಿವಾಸಿ ಅಬ್ದುಲ್ ಖಾದರ್ ಯು. (31) ಎಂದು ತಿಳಿದುಬಂದಿದೆ.ವಿಚಾರಣೆ ವೇಳೆ ನಾಲ್ವರೂ ಕಾರಿನಲ್ಲಿ ಗಾಂಜಾ ತಂದು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 173/2026, ಎನ್ಡಿಪಿಎಸ್ ಕಾಯ್ದೆ 1985ರ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.










