ಪುತ್ತೂರು: ಚಿಕ್ಕಮುನ್ನೂರು ಗ್ರಾಮದ ಮುದ್ದೋಡಿ ನಿವಾಸಿ ಸೌಮ್ಯ (24) ಎಂಬವರು ತೀವ್ರ ಜ್ವರದಿಂದ ಅಸ್ವಸ್ಥಗೊಂಡು ಆ.29ರಂದು ಮೃತಪಟ್ಟಿದ್ದಾರೆ.ಮುದ್ದೋಡಿ ನಿವಾಸಿ ಶೇಖರ್ ಅವರ ಪತ್ನಿಯಾಗಿರುವ ಸೌಮ್ಯ ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದು ಔಷಧಿ ಸೇವಿಸುತ್ತಿದ್ದರು ಎನ್ನಲಾಗಿದೆ.ಆ.29ರಂದು ಅಸ್ವಸ್ಥತೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತಿ ಶೇಖರ್ ಹಾಗೂ ಒಂದೂವರೆ ವರ್ಷದ ಮಗುವನ್ನು ಅಗಲಿದ್ದಾರೆ. ಮೃತ ಸೌಮ್ಯ ಅವರ ತಾಯಿ, ಸೇಡಿಯಾಪು ಕಜೆ ನಿವಾಸಿ ಸುಂದರಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












