ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮುಂದಾಳು ಅಜಿತ್ ರೈ ಹೊಸಮನೆ ವಿರುದ್ಧ ಮನೀಶ್ ಕುಲಾಲ್ ಅವರ ತಂದೆ ಆನಂದ್ ಎಸ್. ಅವರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರ ಪೀಠ ಈ ಆದೇಶ ನೀಡಿದ್ದು, ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರು ಅಜಿತ್ ರೈ ಹೊಸಮನೆ ಪರ ವಾದ ಮಂಡಿಸಿದ್ದರು.ದೂರಿನಲ್ಲಿ ಏನಿತ್ತು?ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಮನೀಶ್ ಕುಲಾಲ್ ಅವರ ತಂದೆ ಆನಂದ್ ಎಸ್. ಅವರು 2023ರ ನವೆಂಬರ್ 10ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಅಜಿತ್ ರೈ ವಿರುದ್ಧ ದೂರು ನೀಡಿದ್ದರು. ಅಜಿತ್ ರೈ ಅವರು ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮನೀಶ್ ಕುಲಾಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದರು.ದೂರಿನ ಆಧಾರದಲ್ಲಿ ನವೆಂಬರ್ 11ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 447, 504 ಹಾಗೂ 506ರ ಅಡಿಯಲ್ಲಿ ಅ.ಕ್ರ. 109/2023ರಂತೆ ಪ್ರಕರಣ ದಾಖಲಾಗಿತ್ತು.ಪ್ರಕರಣ ರದ್ದುಗೊಳಿಸುವಂತೆ ಕೋರಿ ಅಜಿತ್ ರೈ ಹೊಸಮನೆ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.











