ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಚಿನ್ನದ ಸರ ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯನ್ನು ಸಾರ್ವಜನಿಕರು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಹೊಸಂಗಡಿಯಲ್ಲಿ ನಡೆದಿದೆ.ಮಧುರೈ ಮೂಲದ ಮುತ್ತಾತ್ತ (40) ಬಂಧಿತ ಆರೋಪಿ. ಮಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮದುವೆ ಸಮಾರಂಭ ಮುಗಿಸಿ ಹೊಸಂಗಡಿಗೆ ಬರುತ್ತಿದ್ದ ಬಂಗ್ರಮಂಜೇಶ್ವರದ ಪ್ರೇಮಾ (77) ಅವರ ಮೂರು ಪವನ್ ಚಿನ್ನದ ಸರವನ್ನು ಬಸ್ಸಿನಿಂದ ಇಳಿಯುವ ವೇಳೆ ಕತ್ತರಿಸಿ ಕದಿಯಲು ಆರೋಪಿ ಯತ್ನಿಸಿದ್ದಾಳೆ ಎನ್ನಲಾಗಿದೆ.ಇದನ್ನು ಗಮನಿಸಿದ ಸಹಪ್ರಯಾಣಿಕ ಯುವತಿಯೊಬ್ಬರು ತಕ್ಷಣ ಪ್ರೇಮಾ ಅವರನ್ನು ಎಚ್ಚರಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಆರೋಪಿಯನ್ನು ತಡೆದು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ.ಬಂಧಿತ ಮಹಿಳೆಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.











