ಮಂಗಳೂರು, ಸೆ.28: ದೆಹಲಿ ನೋಂದಣಿಯ ಹಳೆಯ ಬಿಎಂಡಬ್ಲ್ಯು ಕಾರನ್ನು ಸರ್ವಿಸಿಗೆ ಒಯ್ಯುತ್ತಿದ್ದಾಗಲೇ ಹೆದ್ದಾರಿ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಬೂದಿಯಾದ ಘಟನೆ ಮಂಗಳೂರು ನಗರದ ಅಡ್ಯಾರ್ ನಲ್ಲಿ ನಡೆದಿದೆ.

ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಬಿಸಿ ರೋಡ್ ಕಡೆಯಿಂದ ಚಾಲಕ ಗುರುದೀಪ್ ಎಂಬವರು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ಸಹ್ಯಾದ್ರಿ ಕಾಲೇಜು ಮುಂಭಾಗಕ್ಕೆ ತಲುಪುತ್ತಿದ್ದಂತೆ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ಕೂಡಲೇ ಕಾರಿನಿಂದ ಹೊರಕ್ಕೆ ಇಳಿದಿದ್ದಾನೆ. ಅನಂತರ, ಎಲ್ಲರೂ ನೋಡುತ್ತಿರುವಾಗಲೇ ನಡುರಸ್ತೆಯಲ್ಲೇ ಧಗ ಧಗನೆ ಕಾರು ಹೊತ್ತಿ ಉರಿದಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಏನೋ ಸಮಸ್ಯೆ ಇದೆಯೆಂದು ಅಡ್ಯಾರಿನ ಬಿಎಂಡಬ್ಲ್ಯು ಗ್ಯಾರೇಜ್ ಗೆ ತರುತ್ತಿದ್ದರು. ಅಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಭಸ್ಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಕೆಲಹೊತ್ತು ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿತ್ತು. ದೆಹಲಿ ನೋಂದಣಿಯ ಬಿಎಂಡಬ್ಲ್ಯು ಕಾರು ಇದಾಗಿದ್ದು 2011ರ ಮಾಡೆಲ್ ಹೊಂದಿದೆ ಎನ್ನಲಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ಸುರತ್ಕಲ್ NITK ಇಂಜಿನಿಯರಿಂಗ್ ಕಾಲೇಜು ಸಮೀಪದಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಬಿಎಂಡಬ್ಲ್ಯು ಕಾರು ಇದೇ ರೀತಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!