ಉಳ್ಳಾಲ: ಮನೆಯಿಂದ ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತ ವ್ಯಕ್ತಿ.

ಮೂಲತ: ಜಪ್ಪು,ಗೋರ್ದಂಡು ನಿವಾಸಿಯಾದ ಪ್ರಸಾದ್ ಕಳೆದ ಕೆಲ ವರ್ಷಗಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು.‌ ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಅವರು ಅವಿವಾಹಿತರಾಗಿದ್ದು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ.

ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು. ಈ ವೇಳೆ ಮನೆ ಮಂದಿ ನೆರೆಹೊರೆಯವರು ಹುಡುಕಾಡಿದಾಗ ಇಂದು ಬೆಳಿಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪ್ರಸಾದ್ ಅವರ ಪಾದರಕ್ಷೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಪಾಳು ಬಾವಿಯನ್ನು ಇಣುಕಿ ನೋಡಿದಾಗ ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು, ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಮನೆಗೆ ಹಿರಿ ಮಗನಾದ ಮೃತ ಪ್ರಸಾದ್ ತಾಯಿ, ತಂದೆ, ಇಬ್ಬರು ಸಹೋದರರು ,ಓರ್ವ ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!