
ಉಳ್ಳಾಲ: ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆಂಟಿ ಡ್ರಗ್ ಟೀಮ್ ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಎಂಬಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ ಮಾರಾಟ ಮಾಡುತ್ತಿದ್ದ ಉಳ್ಳಾಲದ ಮೂವರು ಪೆಡ್ಲರ್ ಗಳನ್ನ ಬಂಧಿಸಿ ಸುಮಾರು 1.5 ಲಕ್ಷ ಮೌಲ್ಯದ 50 ಗ್ರಾಂ ಡ್ರಗ್ ವಶಡಿಸಿಕೊಂಡಿತ್ತು. ಬೇಟೆ ಮುಂದುವರಿಸಿದ ಪೊಲೀಸರು ಉಳ್ಳಾಲದ ಮೂವರು ಪೆಡ್ಲರ್ಗಳಿಗೆ ಡ್ರಗ್ ಪೂರೈಸುತ್ತಿದ್ದ ಬೆಳ್ತಂಗಡಿ ಮೂಲದ ಕಿಂಗ್ ಪಿನ್ ಓರ್ವನನ್ನ ನ.30ರಂದು ಬಂಧಿಸಿದ್ದು ಮತ್ತೆ 1.5 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ಅಲ್ಫಾಝ್(24) ಎಂಬವನನ್ನು ಆಂಟಿ ಡ್ರಗ್ ಟೀಮ್ ಪೊಲೀಸರು ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿ ವಶಕ್ಕೆ ಪಡೆದಿದ್ದಾರೆ. ಈತನಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಮೋಕ್ ಪಾಟ್, ಸ್ವಿಝ್ ಡಿಜೈರ್ ಕಾರು, 2 ಮೊಬೈಲ್ ಸೇರಿ ಒಟ್ಟು 7,76,980/- ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಒಟ್ಟು ಪ್ರಕರಣದಲ್ಲಿ 103 ಗ್ರಾಂ ಎಮ್ ಡಿಎಮ್ಎ ಹಾಗೂ 15,52,980/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ನ. 25 ಆಂಟಿ ಡ್ರಗ್ ಟೀಮ್ ಕಾರ್ಯಾಚರಣೆ ನಡೆಸಿ ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಎಂಬಲ್ಲಿನ ನಿರ್ಜನ ಕೈಗಾರಿಕಾ ಪ್ರದೇಶದಲ್ಲಿ ಎಮ್ ಡಿಎಮ್ ಎ ಮಾರಾಟ ಮಾಡುತ್ತಿದ್ದ ತಲಪಾಡಿಯ ನಿವಾಸಿ ಗೌತಮ್ (22) ,ಕುಂಪಲ ಹನುಮಾನ್ ದೇವಸ್ಥಾನ ಬಳಿಯ ನಿವಾಸಿ ಕಾರ್ತಿಕ್ (27) ,ತೊಕ್ಕೊಟ್ಟು ಗಣೇಶ ನಗರದ ,ಗಣೇಶ ಮಂದಿರದ ಬಳಿ ನಿವಾಸಿ ನಿಖಿಲ್ (28) ಎಂಬ ಮೂವರು ಪೆಡ್ಲರ್ ಗಳನ್ನ ಬಂಧಿಸಿತ್ತು.ಬಂಧಿತರಿಂದ 1.50,000/- ಅಂದಾಜು ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು,ಕೃತ್ಯಕ್ಕೆ ಬಳಸಿದ್ದ ಬೆಲೆನೋ ಕಾರು, 3 ಮೊಬೈಲ್ ಫೋನ್ಗಳು ,ಡಿಜಿಟಲ್ ತೂಕ ಮಾಪನ ಹಾಗೂ ಗಾಜಿನ ನಳಿಕೆ ಸೇರಿದಂತೆ 7.76,980/- ಮೌಲ್ಯದ ಸೊತ್ತನ್ನ ವಶಪಡಿಸಿಕೊಳ್ಳಲಾಗಿತ್ತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್ ನಾಯಕ್ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕರಾದ ರಾಜೆಂದ್ರ,ಬಿ, ಪಿಎಸ್ಐ ನಾಗರಾಜ್ ಎಸ್, ಪಿಎಸ್ಐ ಅಶೋಕ್, ಪಿಎಸ್ಐ ವಿನೋದ್,ಎಎಸ್ಐ ಸಂಜೀವ, ಮಹೆಚ್ ಸಿ.ರೇಶ್ಮಾ, ಹೆಚ್. ಸಿ ಶೈಲೇಂದ್ರ, ಹೆಚ್. ಸಿ ದಿನೇಶ್ ಶೆಟ್ಟಿ ,ಸಿಪಿಸಿ ಸುರೇಶ್, ಸಿಪಿಸಿ ರಮೇಶ್ ಮತ್ತು ಆಂಟಿ ಡ್ರಗ್ ಟೀಮ್ನ ಪಿಎಸ್ಐ ಪುನೀತ್ ಹಾಗೂ ಸಿಬ್ಬಂದಿಯವರಾದ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






