

ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿ ಗಂಭೀರ ಗಾಯಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿಗೆ ಖಾಸಗಿ ಕೆಲಸಕ್ಕೆಂದು ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಇಂದು (ಫೆ.04, ಮಂಗಳವಾರ) ಅವರು ಅನಂತಾಡಿಗೆ ತೆರಳಿದ್ದರು. ಈ ಸಂದರ್ಭ ಹೊಸತಾಗಿ ಖರೀದಿಸಿದ ಪಿಸ್ತೂಲನ್ನು ತನ್ನೊಂದಿಗೆ ಒಯ್ದಿದ್ದರು ಎನ್ನಲಾಗಿದೆ.
ಅನಂತಾಡಿಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಪಿಸ್ತೂಲನ್ನು ಅದುಮಿದ ವೇಳೆ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಮಿಸ್ ಫೈರ್ ಆಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೈಯಲ್ಲಿದ್ದ ಪಿಸ್ತೂಲು ಮಿಸ್ ಫೈರ್ ಆದ ವೇಳೆ ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ಮಂಗಳೂರಿನ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೇಟು ತಗಲಿದ ವಿಚಾರ ಮಂಗಳವಾರ ಸಂಜೆಯ ವೇಳೆಗೆ ಜಿಲ್ಲಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೂ ಕಾರಣವಾಯಿತು. ಈ ಕುರಿತು ರಾತ್ರಿವರೆಗೂ ಸಮೀಪದ ಪೊಲೀಸ್ ಠಾಣೆಗಳಲ್ಲಿ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.
ಬಿ.ಸಿ.ರೋಡಿನಲ್ಲಿ ವಾಸ
ಬಂಟ್ವಾಳದ ಬಿ.ಸಿ.ರೋಡಿನಲ್ಲಿ ವಾಸಿಸುತ್ತಿರುವ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರು, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಯನ್ನೂ ಹೊಂದಿದ್ದಾರೆ.
