ಮಹಿಳೆಯ ಹೆರಿಗೆ ಸಿಸೇರಿಯನ್ ಮಾಡುವ ವೇಳೆ ಬಟ್ಟೆಯೊಂದು ಹೊಟ್ಟೆಯಲ್ಲೇ ಉಳಿದು, ಅದು ಗೊತ್ತಾದ ಬಳಿಕವೂ ವೈದ್ಯರು ನಿರ್ಲಕ್ಯ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದ್ದು, ಘಟನೆಯಿಂದ ನೊಂದ ಮಹಿಳೆಯ ಪತಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ.

ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಮಹಿಳೆ ಪತಿ ಗಗನ್ ದೀಪ್ ಸುದ್ದಿಗೋಷ್ಠಿ ನಡೆಸಿ, ವೈದ್ಯರ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತನ್ನ ಪತ್ನಿ ಎರಡು ತಿಂಗಳು ಅನುಭವಿಸಿದ ನರಕಯಾತನೆಯನ್ನು ವಿವರಿಸಿದರು.

ಸಿಸೇರಿಯನ್ ಬಳಿಕ ಹೊಟ್ಟೆಯಲ್ಲೇ ಉಳಿದ ಬಟ್ಟೆ, ಮೂರು ತಿಂಗಳಿಂದ ಹೊಟ್ಟೆನೋವಿಂದ ನರಳುತ್ತಿದ್ದ ಮಹಿಳೆ

ಇಷ್ಟು ದೊಡ್ಡ ಬಟ್ಟೆಯ ತುಂಡು ಕಾಣಿಸಲಿಲ್ಲ ಎಂದರೆ ಅದು ಯಾರ ತಪ್ಪು? ಅದನ್ನು ನೋಡುವುದನ್ನು ವೈದ್ಯರೇ ಮಾಡಬೇಕಲ್ಲವೇ? ನಾವು ಕಣ್ಣುಮುಚ್ಚಿ ಅವರನ್ನು ನಂಬುವುದಲ್ಲವಾ? 10 ಸೆಂಟಿ ಮೀಟರ್ ಉದ್ದದ ಬಟ್ಟೆ ಯಾಕೆ ಕಾಣಿಸಲಿಲ್ಲ? ಅದು ಸ್ಕ್ಯಾನಿಂಗ್‌ನಲ್ಲಿ ಕಂಡುಬಂದರೂ ಯಾಕೆ ಅವರು ಅದನ್ನು ನಿರ್ಲಕ್ಷ್ಯ ಮಾಡಿದರು? ನಾನು ಸಾಮಾನ್ಯ ಕೃಷಿಕ. ಹೊಟ್ಟೆಯಲ್ಲಿ ಬಟ್ಟೆ ಉಳಿದಿದೆಯೇ, ಕತ್ತರಿ ಉಳಿದಿದೆಯೇ ಎಂಬುದನ್ನು ಗುರುತಿಸುವ ಕೆಲಸ ಮಾಡಬೇಕಾದದ್ದು ಯಾರು? ವೈದ್ಯರಲ್ಲವೇ? ನಾವು ಅವರನ್ನು ಅಷ್ಟೊಂದು ನಂಬಿದ್ದೇವೆ, ಆದರೆ ಅವರು ಹೀಗ್ಯಾಕೆ ಮಾಡಿದರು? ಕನಿಷ್ಠ ಹೀಗೆ ಆಗಿದೆ ಎಂಬ ಕನಿಕರವನ್ನೂ ಹೊಂದಿರಲಿಲ್ಲ, ಇಂಥ ಸ್ಥಿತಿ ಯಾರಿಗೂ ಬರಬಾರದು. ನನ್ನ ಪತ್ನಿ ಈಗ 29 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾಳೆ. ದೈಹಿಕವಾಗಿ, ಮಾನಸಿಕವಾಗಿ ನನ್ನ ಪತ್ನಿ ಅನುಭವಿಸಿದ ಯಾತನೆಗೆ ಯಾರು ಹೊಣೆ, ನನಗೆ ವೈದ್ಯರ ಮೇಲೆ ಹಾಗೂ ಆಸ್ಪತ್ರೆ ಮೇಲೆ ಅಸಮಾಧಾನ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹೆರಿಗೆಯ ಸಂದರ್ಭ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷತೆಯಿಂದ ಹೊಟ್ಟೆಯಲ್ಲೇ ಬಟ್ಟೆ ಉಳಿದು, ಅದನ್ನು ತಿಳಿದ ಬಳಿಕವೂ ತೆರವು ಮಾಡದೆ ಉಳಿಸಿದ್ದಾರೆ. ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯವನ್ನು ದೇಹದ ವಿವಿಧ ಭಾಗಕ್ಕೆ ಹೋದ ಕಾರಣದಿಂದ ಪತ್ನಿಯ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಮೂರು ತಿಂಗಳಿಂದ ಮಾನಸಿಕ ಯಾನೆಯಲ್ಲಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದೆ ಇಂತಹ ಸ್ಥಿತಿ ಯಾರಿಗೂ ಬರಬಾರದು. ಸಂಬಂಧಪಟ್ಟವರು ಈಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಸಮಸ್ಯೆಗೊಳಗಾದ 33 ವರ್ಷ ಪ್ರಾಯದ ಶರಣ್ಯ ಲಕ್ಷ್ಮಿ ಬಿ ಅವರ ಪತಿ ಗಗನ್ ದೀಪ್ ಬಿ. ಆಗ್ರಹಿಸಿದರು.

ಸಮಸ್ಯೆ ಕುರಿತು ಸುದ್ದಿಗೋಷ್ಠಿಯಲ್ಲಿ ಗಗನ್ ದೀಪ್ ಹೇಳಿದ್ದಿಷ್ಟು

2024ರ ನ.27ರಂದು ಪುತ್ತೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪತ್ನಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ಡಿ.2 ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಇದಾಗ ಬಳಿಕ ಮನೆಯಲ್ಲಿ ವಿಪರೀತ ಜ್ವರ ಬಂದಿದ್ದು, ಹೆರಿಗೆ ಮಾಡಿಸಿದ ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿದಾಗ ಜ್ವರದ ಔಷಧಿಯನ್ನು ಬಳಸುವಂತೆ ಸೂಚಿಸಿದ್ದಾರೆ. ಹೊಟ್ಟೆಯ ಎಡದ ಭಾಗದಲ್ಲಿ ಜಗ್ಗಿದ್ದು, ಬಲ ಭಾಗದಲ್ಲಿ ಕೈಗೆ ಏನೋ ಸಿಕ್ಕಿದ ಅನುಭವ ಪತ್ನಿಗೆ ಆಗುತ್ತಿತ್ತು. ಎರಡು ದಿನದಲ್ಲಿ ಜ್ವರ ಕಮ್ಮಿಯಾಗದ ಸಂದರ್ಭ ಮತ್ತೆ ವಿಚಾರಿಸಿದಾಗ ವೈದ್ಯರು ಹೆಮಟೋಮ್ ಆಗಿರಬಹುದೆಂಬ ಹೇಳಿದ್ದಲ್ಲದೆ ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಎಂದಿದ್ದಾರೆ. ಮತ್ತೆ ಮತ್ತೆ ಕೇಳಿದಾಗ ಆಲ್ಟ್ರಾ ಸೌಂಡ್ ಮಾಡಬಹುದೆಂದು ಹೇಳಿದ್ದಾರೆ. ಇದರಲ್ಲಿ ೧೦ಸೆ.ಮೀ. ಮಾಪ್ ಪಾರ್ಮೇಶನ್ ಇರುವುದು ಕಂಡು ಬಂದಿದೆ. ಬೇರೆ ಔಷಧಿಯನ್ನು ನೀಡಿದ್ದು, ಜ್ವರ ಕಡಿಮೆಯಾಗಿದೆ. ಆದರೆ ಸಂಧಿ ನೋವು ಪ್ರಾರಂಭವಾಗಿದೆ. ಈ ಬಗ್ಗೆಯೂ ವೈದ್ಯರಲ್ಲಿ ವಿಚಾರಿಸಿದಾಗ ಆರ್ಥೋ ಇರಬಹುದೆಂಬ ಹೇಳಿದ್ದಾರೆ. ಕೆಲವು ದಿನ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಯಿತು. ಇದನ್ನು ಪುನಃ ವೈದ್ಯರಲ್ಲಿ ತಿಳಿಸಿದಾಗ ರುಮೊಟೋಲೋಜಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ.

ಮಂಗಳೂರಿನ ತಜ್ಞರು ವರದಿಗಳನ್ನು ಪರಿಶೀಲನೆ ನಡೆಸಿ ಸಿಸರೇಯಿನ್ ಮಾಡಿದ ವೈದ್ಯರಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ 10 ಸೆ.ಮೀ. ಮಾಸ್ ತೋರಿಸುತ್ತಿದ್ದರೂ ಯಾಕೆ ತೆರವು ಮಾಡಿಲ್ಲ ಎಂದು ಹೇಳಿದ್ದು, ಪಾರಿನ್ ಬಾಡಿ ಆಗಿರ್ಲಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಸಿಟಿಸಿ ಸ್ಕ್ಯಾನ್ ಮಾಡಿದಾಗ ಸರ್ಜಿಕಲ್ ಮಾಪ್ ಅನ್ನು ಸೂಚಿಸುವ ಗ್ಲಾಸಿಪಿಗೋಮಾ ಇದೆಯೆಂಬುದು ಬೆಳಕಿಗೆ ಬಂದಿದ್ದು, ಒಂದುವರೆ ತಿಂಗಳು ಆಗಿರುವ ಕಾರಣ ಈಗಲೇ ಅಪಾಯದ ಸ್ಥಿತಿ ತಲುಪಿದೆ ಎಂದಿದ್ದಾರೆ. ದ್ವಿತೀಯ ಅಭಿಪ್ರಾಯ ಪಡೆದು ತಕ್ಷಣ ಅದನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಶಸ್ತ್ರಶಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.

ಉತ್ತಮ ಚಿಕಿತ್ಸೆಯಿಂದ ಅಪಾಯದಿಂದ ಪಾರು

ಜ.25 ರಂದು ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಡಾ. ವಿವೇಕ್ ಕಜೆ ನೇತೃತ್ವದಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆಯನ್ನು ತೆರವು ಮಾಡಲಾಗಿದೆ. ಜ್ವರ ಬರುತ್ತಿತ್ತು, ಸೋಂಕು ತಗುಲಿದ ಬಗ್ಗೆ ವರದಿಗಳು ಬಂದವು. ಸೋಂಕಿಗೆ ಕಾರಣವಾದ ರೋಗಾಣುಗಳು ರಕ್ತದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಲಂಗ್ಸ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ, ರಕ್ತದ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳು ಈ ಸಂದರ್ಭ ಕಾಣಿಸಿಕೊಂಡಿದೆ. ಸಿಟಿ ಸ್ಕ್ಯಾನ್ ಮೂಲಕ ಸೋಕು ತಗುಲಿತದಲ್ಲಿ ಕೀವು ತುಂಬಿರುವುದು ತಿಳಿದು ಬಂದಿದ್ದು, ತಕ್ಷಣ ಅದನ್ನು ಆಧುನಿಕ ತಂತಜ್ಞಾನ ಬಳಸಿ ತೆಗೆಯುವ ಕಾರ್ಯವಾಗಿತು. ಬೇಕಾದ ಎಲ್ಲಾ ಚಿಕಿತ್ಸೆಗಳೂ ತ್ವರಿತವಾಗಿ ನಡೆದಿದೆ. ವೈದ್ಯರು ಸಾಕಷ್ಟು ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಸುಮಾರು ೨೨ ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ.

ಮೆಡಿಕಲ್ ಬೋರ್ಡ್ ನಿಯಮ

ಆಪರೇಷನ್ ಮಾಡುವ ಸಂದರ್ಭ ಥಿಯೇಟರ್ ಒಳಗೆ ತೆಗೆದುಕೊಂಡು ಹೋದ ವಸ್ತುಗಳು ಹಾಗೂ ಕೊನೆಯಲ್ಲಿ ಉಳಿಕೆಯಾದ ವಸ್ತುಗಳನ್ನು ತಾಳೆ ಹಾಕಿ ಸರಿಯಿದೆ ಎಂದು ದೃಢೀಕರಿಸಬೇಕು. ಆ ಬಳಿಕ ಆಪರೇಷನ್ ಮಾಡಿದ ಜಾಗವನ್ನು ಮುಚ್ಚಬೇಕೆಂಬುದು ಮೇಡಿಕಲ್ ಬೋರ್ಡ್ ನಿಯಮವಿದೆ. ಒಟಿಯಲ್ಲಿ ಎಲ್ಲವೂ ಟ್ಯಾಲಿ ಇದೆ ಎಂದಾದರೆ, ಈಗ ಹೊಟ್ಟೆಯಲ್ಲಿ ದೊಡ್ಡದಾದ ಬಟ್ಟೆ ಬಾಕಿಯಾಗಿದ್ದು ಹೇಗೆ ಎಂಬುದನ್ನು ಪ್ರಶ್ನಿಸಿದಾಗ, ಯಾರು ನಿರ್ಲಕ್ಷಿಸಿದ್ದಾರೆಂದು ತಿಳಿಯುತ್ತಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ ಎಂದು ಗಗನ್ ದೀಪ್ ಹೇಳಿದರು.

ವಿವಿಧ ಕಡೆಗಳಲ್ಲಿ ದೂರು

ಘಟನೆಯಿಂದ ಮಹಿಳೆ ಚೇತರಿಸುತ್ತಿದ್ದಂತೆ ವಿಚಾರ ಹೊರ ಪ್ರಪಂಚಕ್ಕೆ ತೆರೆದುಕೊಂದಿದ್ದು, ಪಿ.ಜಿ. ಪೋರ್ಟಲ್ ನಲ್ಲಿ ಮೊದಲು ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಾರೀ ದೊಡ್ಡ ಸುದ್ದಿ ಮಾಡಿದೆ. ಫೆ.22ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯತೆಯ ಬಗ್ಗೆ ದೂರು ನೀಡಲಾಗಿದೆ. ಫೆ.23ರಂದು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಪುತ್ತೂರು ಪೊಲೀಸ್ ನಿರೀಕ್ಷರಿಗೆ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲೂ ದೂರು ದಾಖಲಿಸಲಾಗಿದೆ. ಪತ್ನಿ ಆರೈಕೆಯಲ್ಲಿ ಜತೆಗೆ ಇರಬೇಕಾದ ಹಿನ್ನಲೆಯಲ್ಲಿ ಖುದ್ದು ಇಲಾಖೆಗಳಿಗೆ ಹೋಗಿ ದೂರು ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಎಲ್ಲ ಕಡೆಗೆ ಇಮೇಲ್ ಹಾಗೂ ಪೋರ್ಟಲ್ ಮೂಲಕ ದೂರು ನೀಡಲಾಗಿದೆ ಎಂದು ಗಗನ್ ದೀಪ್ ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!