
ಮಲ್ಪೆಯಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ ಇದೀಗ ಸುಖಾಂತ್ಯಕ್ಕೆ ಬಂದಂತೆ ಕಾಣುತ್ತಿದೆ.
ಸಂತ್ರಸ್ತೆ ಲಕ್ಕವ್ವ ಬಾಯಿ ನೇತೃತ್ವದಲ್ಲಿ ಇಂದು ಪರಿಶಿಷ್ಟ ಸಮುದಾಯದವರು ಸೇರಿಕೊಂಡು ನಾವು ರಾಜಿ ಮಾಡಿಕೊಂಡಿದ್ದೇವೆ.
ಪ್ರಕರಣವನ್ನು ಹಿಂಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಸಮುದಾಯದವರು ಮನವಿ ಸಲ್ಲಿಸಿದರು.
ಮೊನ್ನೆಯಷ್ಟೇ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಆರೋಪದಡಿ ಐವರು ಮೀನುಗಾರರನ್ನು ಬಂಧಿಸಿ ಜಾತಿ ಅವರ ವಿರುದ್ಧ ನಿಂದನೆ ಕೇಸ್ ಕೂಡ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರರು ಆಕ್ರೋಶಗೊಂಡು, ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರು.
ಅನಗತ್ಯವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಮಲ್ಪೆ ಬಂದರಿನ ಮೀನುಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆ ಮೇಲೆ ಹಲ್ಲೆ ನಡೆದದ್ದು ತಪ್ಪು. ಆದರೆ ಸುಮ್ಮನೇ ಜಾತಿ ನಿಂದನೆ ಕೇಸ್ ಹಾಕಿರುವುದು ಸರಿಯಲ್ಲ. ಕೂಡಲೇ ಪ್ರಕರಣ ವಾಪಸ್ ಪಡೆಯದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದರು. ಈ ಬೆನ್ನಲ್ಲೇ ಇಂದು ಸಂತ್ರಸ್ತ ಮಹಿಳೆ ಮತ್ತು ಸಮುದಾಯದವರು ಮೀನುಗಾರರೊಂದಿಗೆ ಸಂಧಾನ ಮಾಡಿಕೊಂಡಿದ್ದೇವೆ ಎಂದಿದ್ದು, ಕೇಸ್ ವಾಪಸ್ಗೆ ಡಿಜಿಗೆ ಮನವಿ ಮಾಡಿದರು






