ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಆರೋಪದಡಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಪಿಎಸ್‌ಐ ಪಿ.ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಚಂದ್ರಾಲೇಔಟ್‌ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್‌ ದಾಖಲಾಗಿದೆ.

ಕಿಶೋರ್‌ ಅವರ ಪತ್ನಿ, ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್‌.ವರ್ಷಾ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕಿಶೋರ್ ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್‌ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು.

‘ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವರ್ಷಾ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ದೂರಿನಲ್ಲಿ ಏನಿದೆ?: ‘ಮಧ್ಯವರ್ತಿಯೊಬ್ಬರು ಹುಡುಗನನ್ನು ತೋರಿಸಿದ್ದರು. ಎರಡು ಕುಟುಂಬಗಳು ಒಪ್ಪಿ ಮದುವೆಗೆ ನಿರ್ಧಾರವಾಗಿತ್ತು. ಮಾತುಕತೆ ವೇಳೆ ಮದುವೆ ಖರ್ಚಿಗೆಂದು ₹25 ಲಕ್ಷ ಕೊಡುವಂತೆ ಪುಟ್ಟಚನ್ನಮ್ಮ ಹಾಗೂ ಕುಟುಂಬಸ್ಥರು ಕೇಳಿದ್ದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ. ₹10 ಲಕ್ಷ ಕೊಡುತ್ತೇವೆ ಎಂದು ಹೇಳಿದಾಗ ಅವರು ಒಪ್ಪಿಕೊಂಡಿದ್ದರು. 2023ರ ನವೆಂಬರ್‌ 24ರಂದು ನಿಶ್ಚಿತಾರ್ಥ ನಡೆದಿತ್ತು. ಆಗ, 18 ಗ್ರಾಂನ ಚಿನ್ನದ ಉಂಗುರವನ್ನು ಕಿಶೋರ್‌ಗೆ ಹಾಕಿದ್ದೆವು. ಕೆಲವು ದಿನಗಳ ಬಳಿಕ ಕಾರು ಕೊಡಿಸುವಂತೆ ಕಿಶೋರ್ ಕೇಳಿದ್ದರು. ಕಾರು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ತಂದೆಯವರಿಗೆ ವಿಷಯ ಗೊತ್ತಾಗಿ, ಕಾರು ಕೊಡಿಸುವುದಾಗಿ ಹೇಳಿದ್ದರು. ಬೆಂಗಳೂರಿನ ರಾಜಾಜಿನಗರದ ಹುಂಡೈ ಶೋರೂಂನಲ್ಲಿ ₹23 ಲಕ್ಷ ಮೌಲ್ಯದ ಕಾರು ಕೊಡಿಸಿದ್ದೆವು’ ಎಂದು ವರ್ಷಾ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

2024ರ ಫೆ.21ರಂದು ಮದುವೆ ನಡೆದಿತ್ತು. ಮದುವೆ ಸಂದರ್ಭದಲ್ಲಿ ₹10 ಲಕ್ಷ ನಗದು, ಹುಡುಗನಿಗೆ 135 ಗ್ರಾಂ ಚಿನ್ನದ ಆಭರಣ, ನನಗೆ 850 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ನೀಡಿದ್ದರು. ಅದ್ದೂರಿಯಿಂದ ಮದುವೆ ಮಾಡಿಕೊಡಲು ಪೋಷಕರು ₹60 ಲಕ್ಷ ಖರ್ಚು ಮಾಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮದುವೆಯಾದ ಸಂದರ್ಭದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪಿ.ಕಿಶೋರ್‌ ಕೆಲಸ ಮಾಡುತ್ತಿದ್ದರು. ಈ ಠಾಣೆಯಲ್ಲಿ ಯಾವುದೇ ಆದಾಯ ಇಲ್ಲ. ಬೇರೆ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು. ವರ್ಗಾವಣೆ ಮಾಡಿಸಿಕೊಳ್ಳಲು, ಮೇಲಾಧಿಕಾರಿಗಳಿಗೆ ಲಂಚ ಕೊಡಬೇಕು. ನಿಮ್ಮ ತಂದೆಯಿಂದ ₹10 ಲಕ್ಷ ತೆಗೆದುಕೊಂಡು ಬರುವಂತೆ ಹೇಳಿದ್ದರು. ಈಗಾಗಲೇ ಮದುವೆಗೆ ₹1 ಕೋಟಿ ಖರ್ಚಾಗಿದೆ. ಮತ್ತೆ ಹಣ ಕೇಳಿದರೆ, ತಂದೆ ಎಲ್ಲಿಂದ ಹಣ ತಂದು ಕೊಡುತ್ತಾರೆಂದು ಪ್ರಶ್ನಿಸಿದ್ದೆ. ಗನ್‌ ತೆಗೆದುಕೊಂಡು ಶೂಟ್‌ ಮಾಡಲು ಮುಂದಾಗಿದ್ದರು. ಧರ್ಮಸ್ಥಳಕ್ಕೆ ವರ್ಗಾವಣೆಯಾದ ಮೇಲೆ ಪೀಠೋಪಕರಣ ಖರೀದಿಗೆ ₹2 ಲಕ್ಷ ತೆಗೆದುಕೊಂಡು ಬರುವಂತೆ ಹೇಳಿದ್ದರು. ಅದಕ್ಕೆ ಒಪ್ಪದಿದ್ದಾಗ ವರದಕ್ಷಿಣೆ ವಿಚಾರವಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿದ್ದ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದರು. ಇದೇ ತಿಂಗಳ 21ರಂದು ಕಿಶೋರ್ ಅವರು ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಬೈಯ್ದು, ಪೊಲೀಸ್‌ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಪೋಷಕರೊಂದಿಗೆ ಬೆಂಗಳೂರಿಗೆ ಬಂದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ’ ಎಂಬುದಾಗಿ ದೂರಿನಲ್ಲಿ ವರ್ಷಾ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!