
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಇಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ಕನ್ನಡಿಗ ಸೇರಿದಂತೆ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಒಡ್ಡುಗೈ ಎನಿಸಿಕೊಂಡಿರುವ ಟಿಆರ್ಎಫ್ (TRF) ಉಗ್ರ ಸಂಘಟನೆ ಹೊಣೆಯೊತ್ತಿದೆ.
ಈ ದುರ್ಘಟನೆಯಲ್ಲಿ ಶಿವಮೊಗ್ಗ ಮೂಲದ ಒಬ್ಬ ಪ್ರವಾಸಿಯ ಮರಣವಾಗಿದ್ದು, ಇತರ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಸಂಬಂಧ ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್, ‘ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗ ರಾಜಕೀಯ ಮಾತನಾಡುವ ಸಂದರ್ಭವಲ್ಲ. ಶಿವಮೊಗ್ಗದವರು ಮೃತಪಟ್ಟಿರುವ ಮಾಹಿತಿ ಬಿಟ್ಟರೆ ಇನ್ನೂ ಸಂಪೂರ್ಣ ವಿವರಗಳು ಬಂದಿಲ್ಲ. ಹೆಚ್ಚಿನ ಮಾಹಿತಿ ಬರಬೇಕಿದೆ. ಜಮ್ಮು-ಕಾಶ್ಮೀರದಲ್ಲಿ 2000ಕ್ಕಿಂತ ಹೆಚ್ಚು ಇಂತಹ ಘಟನೆಗಳು ನಡೆದಿವೆ, ಕಳೆದ 10 ವರ್ಷಗಳಲ್ಲಿ 800ಕ್ಕೂ ಹೆಚ್ಚು ಸಣ್ಣ ಸ್ಫೋಟಗಳಾಗಿವೆ. ಆದರೆ ಇವುಗಳ ಬಗ್ಗೆ ವ್ಯಾಪಕ ಚರ್ಚೆಯಾಗಿಲ್ಲ’ ಎಂದು ಹೇಳಿದ್ದಾರೆ.
ಪುಲ್ವಾಮ ದಾಳಿ ಬಳಿಕ ಮರೆತುಬಿಟ್ಟಿದ್ರು:
ಸಚಿವರು ಮುಂದುವರಿದು, ‘ಪುಲ್ವಾಮ ದಾಳಿಯ ಬಗ್ಗೆ ಎಲ್ಲರೂ ಮರೆತುಬಿಟ್ಟಿದ್ದಾರೆ. 300 ಕೆಜಿ RDX ಎಲ್ಲಿಂದ ಬಂತು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ರಾಜ್ಯಪಾಲರು ಸಂಪೂರ್ಣ ವರದಿ ಕೊಟ್ಟಿದ್ದರೂ ಚರ್ಚೆಯಾಗಿಲ್ಲ. ಈಗ ರಾಜಕೀಯ ಟೀಕೆ ಸರಿಯಲ್ಲ, ಆದರೆ ಸಂದರ್ಭ ಬಂದಾಗ ಮಾತನಾಡುತ್ತೇವೆ. ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿ. ಅಲ್ಲಿ ಸಿಲುಕಿರುವ ಯಾವುದೇ ರಾಜ್ಯದ ಜನರು ಸುರಕ್ಷಿತವಾಗಿ ವಾಪಸ್ ಬರಲಿ’ ಎಂದು ಹಾರೈಸಿದರು.
ಭಾರತೀಯ ಸೇನೆಯ ಕಾರ್ಯಾಚರಣೆ: ದಾಳಿಯ ನಂತರ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಉಗ್ರರ ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ಸಾಬೀತಾಗಿದೆ. ಈ ಬಗ್ಗೆ ಮಾಹಿತಿಯನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ. ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕರ್ನಾಟಕ ಸರ್ಕಾರ ಕೂಡಲೇ ಕ್ರಮ ಕೈಗೊಂಡಿದೆ. ಸದ್ಯ ಈ ಘಟನೆಯಿಂದಾಗಿ ರಾಷ್ಟ್ರದಾದ್ಯಂತ ಆತಂಕ ಮೂಡಿದ್ದು, ಭಾರತೀಯ ಸೇನೆಯ ಕಾರ್ಯಾಚರಣೆಯ ಯಶಸ್ಸಿಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.






