
ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಹೆದ್ದಾರಿಯಲ್ಲಿ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಘಟನೆ ಬೆನ್ನಲ್ಲೇ, ಇದೀಗ ಉತ್ತರ ಪ್ರದೇಶದ ಗೊಂಡಾದ ಬಿಜೆಪಿ ಜಿಲ್ಲಾಧ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಪಕ್ಷದ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಶ್ಯಪ್ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದ್ದು, ಬಿಜೆಪಿಗೆ ಮುಜುಗರ ತಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಕ್ಷವು ಕಶ್ಯಪ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಏಪ್ರಿಲ್ 12, 2025 ರ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೊದಲ ವೀಡಿಯೋದಲ್ಲಿ, ರಾತ್ರಿ 9:35ಕ್ಕೆ ಒಬ್ಬ ವ್ಯಕ್ತಿ ಕಚೇರಿಯ ಗೇಟ್ ತೆರೆಯುತ್ತಾನೆ. ಯುವತಿಯೊಬ್ಬಳು ಒಳಗಿರುವುದನ್ನು ಗಮನಿಸಿ, ಅವನು ಆಕೆಗೆ ಸನ್ನೆ ಮಾಡುತ್ತಾನೆ. ಎರಡನೇ ವೀಡಿಯೋದಲ್ಲಿ, ರಾತ್ರಿ 9:39ಕ್ಕೆ ಆ ಯುವತಿ ಬ್ಯಾಗ್ನೊಂದಿಗೆ ಮೆಟ್ಟಿಲು ಹತ್ತುತ್ತಿರುವುದು ಕಂಡುಬರುತ್ತದೆ. ಕಶ್ಯಪ್ ಆಕೆಯನ್ನು ಹಿಂಬಾಲಿಸಿ, ತನ್ನ ತೋಳುಗಳಿಂದ ಆಕೆಯನ್ನು ತಬ್ಬಿಕೊಳ್ಳುವ ದೃಶ್ಯ ದಾಖಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ, ಅಮರ್ ಕಿಶೋರ್ ಕಶ್ಯಪ್ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆ ಯುವತಿ ಪಕ್ಷದ ಸಕ್ರಿಯ ಸದಸ್ಯೆಯಾಗಿದ್ದು, ಅನಾರೋಗ್ಯದಿಂದಾಗಿ ಕಚೇರಿಯಲ್ಲಿ ಸ್ವಲ್ಪ ಸಮಯ ಇರಲು ವಿನಂತಿಸಿಕೊಂಡಿದ್ದಳು ಎಂದು ಅವರು ಹೇಳಿದ್ದಾರೆ. ‘ನನ್ನ ಉದ್ದೇಶ ತಪ್ಪಾಗಿದ್ದರೆ, ಸಿಸಿಟಿವಿ ಮತ್ತು ಲೈಟ್ಗಳನ್ನು ಆಫ್ ಮಾಡುತ್ತಿದ್ದೆ. ಆದರೆ, ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯಿಂದ ಪಕ್ಷಕ್ಕೆ ಮುಜುಗರವಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಕಶ್ಯಪ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕಶ್ಯಪ್ರ ನಡವಳಿಕೆಯು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಮತ್ತು ಅಶಿಸ್ತನ್ನು ತೋರಿಸಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ರಾಜ್ಯಾಧ್ಯಕ್ಷರ ಸೂಚನೆಯಂತೆ, ಕಶ್ಯಪ್ ಅವರು 7 ದಿನಗಳ ಒಳಗೆ ರಾಜ್ಯ ಕಚೇರಿಗೆ ಲಿಖಿತ ವಿವರಣೆ ಸಲ್ಲಿಸಬೇಕು. ಸರಿಯಾದ ಸ್ಪಷ್ಟಿಕರಣ ನೀಡದಿದ್ದರೆ , ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.






