
ವಿಚಿತ್ರ ಎಂಬಂತೆ ತನ್ನ ಅಕ್ಕನ ಸಾವಿನಿಂದ ಹಲವು ವರ್ಷಗಳ ಕಾಲ ಮನನೊಂದ ಯುವಕನೋರ್ವನು ಸಹೋದರಿ ಧರಿಸುತ್ತಿದ್ದ ಸೀರೆ, ಆಭರಗಳನ್ನೇ ತೊಟ್ಟು ನೇಣು ಬಿಗಿದುಕೊಂಡ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ಯುವಕ ಸಂಜಯ್ ಎಂಬುವವನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಐಟಿಐ ವಿದ್ಯಾರ್ಥಿಯಾಗಿದ್ದ ಸಂಜಯ್ ನ ಅಕ್ಕ ರಾಧಾ ಎಂಬುವವರನ್ನು 2013ರಲ್ಲಿ ಆಕೆಯ ಅತ್ತೆಯ ಮನೆಯವರು ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅಂದಿನಿಂದ ತನ್ನ ಅಕ್ಕನ ಸಾವಿನ ಕೊರಗಿನಲ್ಲಿದ್ದ ಸಂಜಯ್ ಇದೀಗ ಅಕ್ಕ ರಾಧಾಳ ಸೀರೆ, ಅವಳು ಬಳಸುತ್ತಿದ್ದ ಆಭರಣಗಳನ್ನೇ ಧರಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೇ ರಾಧಾಳ ಸಾವಿನಿಂದ ನಂತರದಲ್ಲಿ ಸಂಜಯ್ ತೀವ್ರವಾಗಿ ನೊಂದಿದ್ದ ಎಂಬುವುದು ಕುಟುಂಬಸ್ಥರು ಅಭಿಪ್ರಾಯವಾಗಿದೆ ಎಂದು ವರದಿಯಾಗಿದೆ.
ಕಳೆದ ಮೇ.23ರಂದು ಸಂಜಯ್ ಕುಟುಂಬದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಹೊರಗೆ ಹೋಗಿದ್ದರು. ಮದುವೆಗೆ ಹೋಗಲು ನಿರಾಕರಿಸಿ ಮನೆಯಲ್ಲೇ ಸಂಜಯ್ ಉಳಿದಿದ್ದನು. ಸಂಜಯ್ಗೆ ಅವರ ಅಣ್ಣ ಧರ್ಮೇಂದ್ರ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಕ್ಕೆ ಮನೆಗೆ ದೌಡಾಯಿಸಿದ ಕುಟುಂಬಕ್ಕೆ ಸಂಜಯ್ನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ದರ್ಶನವಾಗಿ ಸಿಡಿಲುಬಡಿದಂತಾಗಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸಂಜಯ್ನ ಮೃತದೇಹವು ಮಹಿಳೆಯಂತೆ ವೇಷ, ಸೀರೆ, ಮಂಗಳಸೂತ್ರ ಮತ್ತು ಆಭರಣಗಳನ್ನು ಧರಿಸಿದ್ದ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ.
ಅತಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






