ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಘಟನೆ ತಲೆತಗ್ಗಿಸುವಂಥದ್ದು. ಇಂಥ ಘಟನೆಗಳು ಮರುಕಳುಹಿಸದಂತೆ ಕ್ರಮ ವಹಿಸಬೇಕು.

ಘಟನೆಗೆ ಸಂಬಂಧಿಸಿ ಈಗಾಗಲೇ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮರೆಯಲ್ಲಿ ನಿಂತು ಜೋರಾಗಿ ಬರುವ ವಾಹನಗಳನ್ನು ಏಕಾಏಕಿ ತಡೆಯುವುದರಿಂದ ಇಂತಹ ಘಟನೆಗಳು ಸಂಭವಿಸುತ್ತವೆ. ಪೊಲೀಸರ ಈ ರೀತಿಯ ವರ್ತನೆ ಸಹಿಸಲಾಗದು. ವಾಹನ ತಪಾಸಣೆಗೆ ಒಂದು ಪದ್ಧತಿ ಇದೆ. ಅದರಂತೆ ನಡೆದುಕೊಳ್ಳಬೇಕು. ಇನ್ನು ಮುಂದೆ ಯಾರೂ ಕೂಡ ಅನಗತ್ಯವಾಗಿ ವಾಹನಗಳನ್ನು ತಡೆಯಬಾರದು ಎಂದು ಹೇಳಿದ್ದಾರೆ.

ಪಾನಮತ್ತರಾಗಿ ಚಾಲನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಜೋರಾಗಿ ಚಾಲನೆ ಮಾಡುವಾಗ ದಿಢೀರ್ ಎಂದು ವಾಹನ ತಡೆಯುವ ಪ್ರವೃತ್ತಿಯನ್ನು ಪೊಲೀಸರು ಬಿಡಬೇಕು ಎಂದು ಪರಮೇಶ್ವರ್ ತಾಕೀತು ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಭೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಂಡ್ಯ ಘಟನೆ ಕುರಿತಾಗಿಯೂ ಪ್ರಸ್ತಾಪಿಸಲಾಗುವುದು. ಪೊಲೀಸರು ಮಾನವೀಯತೆ, ಸ್ವಂತಿಕೆ ಪ್ರದರ್ಶಿಸಿದ್ದರೆ ಬಾಲಕಿಯ ಸಾವು ಆಗುತ್ತಿರಲಿಲ್ಲ. ಪೊಲೀಸರು ಪೋಷಕರ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಇನ್ನು ಮುಂದೆ ತಮ್ಮ ಪ್ರವೃತ್ತಿ ಬದಲಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!