ವಿಚ್ಛೇದಿತೆಯನ್ನು ವಿವಾಹ ಆಗುವುದಾಗಿ ನಂಬಿಸಿ ಖಾಸಗಿ ವಿಡಿಯೊ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ
ಕಾಡುಗೋಡಿಯ ಶ್ರೀನಿವಾಸ್ ಬಂಧಿತ ಆರೋಪಿ.

ಆಂಧ್ರಪ್ರದೇಶದ ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು

ದೂರುದಾರೆ 2014ರಲ್ಲಿ ಮದುವೆ ಆಗಿದ್ದರು. ಕೌಟುಂಬಿಕ ಕಲಹದಿಂದ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು. 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾಡುಗೋಡಿಯಲ್ಲಿರುವ ‘ಡಿಜಿಟಲ್ ಸೇವಾ ಕೇಂದ್ರ’ದಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಪತಿಯಿಂದ ದೂರವಾದ ನಂತರ ಜೀವನ ನಿರ್ವಹಣೆಗಾಗಿ ಕೆಲಸ ಹುಡುಕುತ್ತಿದ್ದ ಸಂತ್ರಸ್ತೆಗೆ ಆರೋಪಿ ಕೆಲಸ ಮಾಡುತ್ತಿದ್ದ ಕೇಂದ್ರದಲ್ಲಿಯೇ ಕೆಲಸ ಸಿಕ್ಕಿತ್ತು. ಮಹಿಳೆಯನ್ನು ಆರೋಪಿ ಪರಿಚಯಿಸಿಕೊಂಡು ಸಲುಗೆ ಬೆಳೆಸಿದ್ದ. ವಿವಾಹ ಆಗುವುದಾಗಿ ನಂಬಿಸಿದ್ದ. ಬಾಡಿಗೆ ಮನೆ ಮಾಡಿ ಆಕೆಯೊಂದಿಗೆ ವಾಸಿಸುತ್ತಿದ್ದ. ಈ ನಡುವೆ ಮಹಿಳೆಯ ಗಮನಕ್ಕೆ ಬಾರದಂತೆ ಖಾಸಗಿ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆ ದೃಶ್ಯಾವಳಿಯನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಹಣ ಕೊಡದಿದ್ದರೆ ಖಾಸಗಿ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಪದೇ ಪದೇ ಬೆದರಿಕೆ ಹಾಕಿದ್ದರಿಂದ ಹೆದರಿದ ಸಂತ್ರಸ್ತೆ 25 ಗ್ರಾಂ ಚಿನ್ನ ಹಾಗೂ ₹ 1 ಲಕ್ಷ ನಗದನ್ನು ನೀಡಿದ್ದರು. ಅದಾದ ಬಳಿಕವೂ ಆರೋಪಿ ಮತ್ತಷ್ಟು ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದ. ಸಂತ್ರಸ್ತೆಯ ಸಹೋದರನಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಅದರಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಲು ಆರೋಪಿ ಪ್ರಯತ್ನಿಸಿದ್ದ. ಮಹಿಳೆ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು

Leave a Reply

Your email address will not be published. Required fields are marked *

Join WhatsApp Group
error: Content is protected !!