
ಪುತ್ತೂರು, ಜುಲೈ 10: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪದಾಧಿಕಾರಿಗಳು ಪುತ್ತೂರಿನಲ್ಲಿ ಗೋಶಾಲೆ ಸ್ಥಾಪನೆಗಾಗಿ ಮುಂಡೂರು ಗ್ರಾಮದ ಗೋಮಾಳದಲ್ಲಿ ಮೀಸಲಿರಿಸಲಾದ ಜಾಗವನ್ನು ಟ್ರಸ್ಟ್ ಗೆ ನೀಡುವಂತೆ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಭೆಯ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳು ಈ ಮನವಿಯನ್ನು ಗಮನದಲ್ಲಿ ಇಟ್ಟುಕೊಂಡು, ಸಂಬಂಧಿತ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗೋ ಸಂರಕ್ಷಣೆ ಹಾಗೂ ಗೋವಿನ ಕಲ್ಯಾಣಕ್ಕಾಗಿ ಸಾರ್ವಜನಿಕರ ಆಕಾಂಕ್ಷೆಯು ಹೆಚ್ಚುತ್ತಿದೆ. ಕಳೆದ ವರ್ಷ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ವೇಳೆ ಪೂಜ್ಯ ಪೇಜಾವರ ಶ್ರೀಗಳು ಪುತ್ತೂರಿನಲ್ಲಿ ಗೋಶಾಲೆ ಸ್ಥಾಪನೆಯ ಅಗತ್ಯತೆ ಬಗ್ಗೆ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದರು. ಇದನ್ನು ಮನನ ಮಾಡಿಕೊಂಡು, ಟ್ರಸ್ಟ್ ಹಲವಾರು ಗೋಪ್ರೇಮಿಗಳ ಸಲಹೆ ಪಡೆದು ಈ ಪ್ರಸ್ತಾಪವನ್ನು ಮುಂದೆ ತಂದು, ಸರಕಾರದಿಂದ ಜಾಗ ಮಂಜೂರಾದಲ್ಲಿ, ವರ್ಷದ ಒಳಗೆ ಸಾರ್ವಜನಿಕ ಸಹಕಾರದಿಂದ ಸುಸಜ್ಜಿತ ಗೋಶಾಲೆ ನಿರ್ಮಿಸುವ ಸಂಕಲ್ಪ ಮಾಡಿದೆ.
ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಕಾರ್ಯದರ್ಶಿ ರವಿ ರೈ, ಹಾಗೂ ಪ್ರಮುಖ ಸದಸ್ಯರಾದ ಉಮೇಶ್ ಕೊಡಿಬೈಲು, ಗಣೇಶ್ ಭಟ್, ಅನಿಲ್ ತೆಂಕಿಲ, ಮತ್ತು ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.






