ರಸ್ತೆಗಳಲ್ಲಿ ತಮ್ಮ ವಾಹನಗಳಿಗೆ ವಿಐಪಿ ಹೆಸರಲ್ಲಿ ಸೈರನ್‌ ಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡೋದು ಸಾಮಾನ್ಯ. ಇದರಿಂದ ಬೇಸತ್ತಿರುವ ಮಂದಿಗೆ ಕೊನೆಗೂ ನೆಮ್ಮದಿಯ ಸುದ್ದಿ ಹೊರಬಿದ್ದಿದೆ. ಇನ್ನು ಮುಂದೆ ಅತಿ ಗಣ್ಯ ವ್ಯಕ್ತಿಗಳ (ವಿಐಪಿ) ಸಂಚಾರದ ವೇಳೆ ವಾಹನಗಳು ಸೈರನ್‌ ಬಳಸದಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಖಡಕ್‌ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಿಸುವ ಉದ್ದೇಶದಿಂದ ಈ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸೈರನ್ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಒಡ್ಡುತ್ತದೆ ಹಾಗು ಶಬ್ದ ಮಾಲಿನ್ಯವೂ ಹೆಚ್ಚುತ್ತದೆ ಎಂದು ಕೂಡಲೇ ಎಚ್ಚರಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಹಠಾತ್ ಸೈರನ್ ಘೋಷಣೆಯಿಂದ ಇತರ ವಾಹನ ಚಾಲಕರಲ್ಲಿ ಗೊಂದಲ ಉಂಟಾಗುವುದು, ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸುವ ಪರಿಸ್ಥಿತಿ ಉಂಟಾಗುವುದು ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ.
ಈ ಕಾರಣದಿಂದಾಗಿ, ಎಲ್ಲ ಘಟಕಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಾಗಿ ಈ ನಿಷೇಧವನ್ನು ಪಾಲಿಸುವಂತೆ ಸೂಚಿಸಲಾಗಿದೆ. ಸೈರನ್ ಬಳಕೆ ತುರ್ತು ಪರಿಸ್ಥಿತಿಗಳಾದ ಹಣಕಾಸು ವಾಹನಗಳು, ಅಗ್ನಿಶಾಮಕ ವಾಹನಗಳು ಮತ್ತು ವೈದ್ಯಕೀಯ ತುರ್ತು ಸೇವೆಗಳಿಗಷ್ಟೇ ಮಿತಿ ಇರಲಿದ್ದು, ವಿಐಪಿ ಸಂಚಾರದಲ್ಲಿ ಸೈರನ್ ಬಳಕೆಯು ಸಂಪೂರ್ಣ ನಿಷೇಧಿಸಲಾಗಿದೆ.

ಯಾರಿಗೆ ವಿನಾಯಿತಿ?
ವಿಐಪಿ ಸಂಚಾರದಲ್ಲಿ ಮಾತ್ರವಲ್ಲದೆ, ಯಾವುದೇ ಪ್ರಕರಣದಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ಪೊಲೀಸ್ ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸೈರನ್ ಬಳಕೆ ಮಾಡಲು ಅನುಮತಿ ಇದೆ. ಇನ್ನು ಮುಂದೆ ವಿಐಪಿ ಸಂಚಾರಕ್ಕೆ ಸೈರನ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ಸೈರನ್ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಮೋಟಾರ್ ವಾಹನ ಕಾಯ್ದೆ 190(2)ರಡಿ ದಂಡ ಹಾಗೂ ಮೂರು ತಿಂಗಳು ಜೈಲುಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಕೆ ಕೊಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!