
ಪುತ್ತೂರು, ಆ.3: ಪುತ್ತೂರು ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 05 ಬನ್ನೂರು ಮಾರ್ನಡ್ಕ ಪ್ರದೇಶದಲ್ಲಿ ನಿರ್ಮಿತವಾದ ಇಂಟರ್ಲಾಕ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ನಡೆಯಿತು.
ಬನ್ನೂರು ಮಾರ್ನಡ್ಕ ಅಬ್ದುಲ್ಲಾ ಅವರ ಅಂಗಡಿ ಬದಿಯಿಂದ ನಾರಾಯಣ ಅವರ ಮನೆಗೆ ಹೋಗುವ ಸುಮಾರು 100 ಮೀಟರ್ ದೂರದ ಈ ಇಂಟರ್ಲಾಕ್ ರಸ್ತೆಯನ್ನು ಸ್ಥಳೀಯ ನಿವಾಸಿಗಳಾದ ನಾರಾಯಣ ಹಾಗೂ ಇಸ್ಮಾಯಿಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭಾ ಸದಸ್ಯೆ ಫಾತಿಮತ್ ಝೂರಾ, ವಾರ್ಡ್ ಸಂಖ್ಯೆ 05ರಲ್ಲಿ ರೂ.1 ಕೋಟಿಕ್ಕಿಂತಲೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ಯೋಜನೆಗಳ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ನಗರಸಭಾ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂದಿ ವರ್ಗ ಹಾಗೂ ಎಸ್ಡಿಪಿಐ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಾವು, ನಗರ ಸಮಿತಿ ಅಧ್ಯಕ್ಷ ಯಾಹಿಯಾ ಕೂರ್ನಡ್ಕ, ಹಿರಿಯರಾದ ಇಬ್ರಾಹಿಂ ಮೋನುಚ, ಅಬ್ದುಲ್ಲಾ, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಮೊಯ್ದೀನ್ ಹಾಜಿ, ಕಾರ್ಯದರ್ಶಿ ಸಿರಾಜ್, ಕಮಿಟಿ ಅಧ್ಯಕ್ಷ ಹನೀಫ್, ವಾರ್ಡ್ ಬೂತ್ ಅಧ್ಯಕ್ಷ ಮಹಮ್ಮದ್ ಹುಸೇನ್, ಸಿಟಿ ಬೂತ್ ಅಧ್ಯಕ್ಷ ಅಬ್ದುಲ್ ಆಸಿಫ್ ಪಿಕೆ, ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್, ಎಸ್ಡಿಪಿಐ ಬನ್ನೂರು ವಾರ್ಡ್ ಅಧ್ಯಕ್ಷ ಪವಾಝ್, ಕಾರ್ಯದರ್ಶಿ ಮುಸ್ತಫಾ ಹಾಗೂ ಕಾರ್ಯಕರ್ತರಾದ ಹಾರಿಸ್ ಪಿಕೆ, ಸಾಬೀರ್, ಇಬ್ರಾಹಿಂ, ಶರೀಫ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಇಫಾಝ್ ಬನ್ನೂರು ಸ್ವಾಗತಿಸಿ ನಿರೂಪಿಸಿದರು.






