
ಪುತ್ತೂರು : ಬಪ್ಪಳಿಗೆ ನಿವಾಸಿ ಕೃಷ್ಣ ರಾವ್ರವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿರುವ ಸಂತ್ರಸ್ತೆಯ ಮನವಿಗೆ ಪೊಲೀಸರು ಸ್ಪಂದಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರ ನಿರ್ದೇಶನದಂತೆ, ಸಂತ್ರಸ್ತೆಯ ಮನೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಪ್ರತಿ ದಿನ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುವ ಕಾರ್ಯ ಆರಂಭಿಸಿದ್ದಾರೆ.
ಮಂಗಳೂರಿನ ಐಜಿಪಿ ಕಚೇರಿಗೆ ಆಗಮಿಸಿದ ಸಂತ್ರಸ್ತೆ, “ನನ್ನ ಮನೆಯ ಸುತ್ತಮುತ್ತ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಅಪರಿಚಿತರು ಓಡಾಡುತ್ತಿರುವುದು ನನಗೂ ನನ್ನ ತಾಯಿಗೂ ಗಮನಿಸಿದೆ. ನನಗೆ ಹಾಗೂ ನನ್ನ ಮಗುವಿಗೆ ಜೀವಭೀತಿ ಇರುವುದರಿಂದ ಪೊಲೀಸ್ ರಕ್ಷಣೆ ಅಗತ್ಯವಿದೆ” ಎಂದು ಮನವಿ ಮಾಡಿದ್ದರು.
ಈ ವೇಳೆ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಸೇರಿದಂತೆ ತಂದೆ-ತಾಯಿ ಸಂತ್ರಸ್ತೆಯ ಜೊತೆಗಿದ್ದರು. ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಮನೆಯನ್ನು ನಾಲ್ಕು ದಿಕ್ಕುಗಳಿಂದ ಸಿಸಿ ಕ್ಯಾಮರಾಗಳಿಂದ ನಿಗಾದಲ್ಲಿ ಇರಿಸಿ, ನಿಯಮಿತವಾಗಿ ಮನೆಗೆ ಭೇಟಿ ನೀಡುವಂತೆ ಕ್ರಮ ಕೈಗೊಂಡಿದೆ.






