
ಉಡುಪಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಉಪನ್ಯಾಸ ಸರಣಿಯನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಸಂವೇದನಾ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮಲ್ಪೆ ಮಾತನಾಡಿ, “ವೀರ ರಾಣಿ ಅಬ್ಬಕ್ಕಳ ಧೈರ್ಯ, ಸಾಹಸ, ಯುದ್ಧಕೌಶಲಗಳು, ರಾಷ್ಟ್ರಪ್ರೇಮ, ನಿಸ್ವಾರ್ಥ ಸೇವೆ ನಮ್ಮ ಯುವಜನಾಂಗಕ್ಕೆ ಪ್ರೇರಣೆಯಾಗಬೇಕು. ಇಂದಿನ ವಿದ್ಯಾರ್ಥಿನಿಯರು ನಿಂತ ನೀರಾಗದೆ ಸಾಧನೆ ಮಾಡಿದ ಸ್ತ್ರೀಯರನ್ನು ಮಾದರಿಯಾಗಿ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು” ಎಂದು ಹೇಳಿದರು.
ರಾಜ್ಯ ಮಟ್ಟದ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಅವರು ಮಾತನಾಡಿ, “ಅಬ್ಬಕ್ಕಳ ಹೋರಾಟದ ಕಥೆ ಇತಿಹಾಸದಲ್ಲಿ ಕೆಲವೇ ಸಾಲುಗಳಲ್ಲಿ ಸೀಮಿತವಾಗಿದೆ. ಆದರೆ ಈ ರೀತಿಯ ಕಾರ್ಯಕ್ರಮಗಳ ಮೂಲಕ ಆ ಹೋರಾಟವನ್ನು ವಿವರವಾಗಿ ಯುವಜನತೆಗೆ ತಲುಪಿಸಿ, ರಾಷ್ಟ್ರೀಯತೆ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಕಾಲೇಜು ಪ್ರಾಂಶುಪಾಲರಾದ ಶ್ರೀ ಸೋಜನ್ ಕೆ.ಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಟಿ. ಶಂಭು ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲೇಖಕಿ, ಕವಯತ್ರಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಚಾಲಕಿ ಡಾ. ಶ್ರೀಮತಿ ಅಡಿಗ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರತಿಭಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಗ್ರಂಥಪಾಲಕರಾದ ವೆಂಕಟೇಶ್ ಧನ್ಯವಾದ ಅರ್ಪಿಸಿದರು. ತೃತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಪೂರ್ವಿಕ ಕಾರ್ಯಕ್ರಮ ನಿರ್ವಹಿಸಿದರು.









