
ಇ ಡಿ ಅಧಿಕಾರಿಗಳ ದಾಳಿ ವೇಳೆ ಗೋಡೆ ಹಾರಿ ತಪ್ಪಿಸಿಕೊಳ್ಳಲು ಟಿಎಂಸಿ ಶಾಸಕ ಯತ್ನಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಸೋಮವಾರ ಜಾರಿ ನಿರ್ದೇಶನಾಲಯದ (ED) ತಂಡವು ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಶಾಸಕ ಜಿಬನ್ ಕೃಷ್ಣ ಸಹಾ ಅವರ ನಿವಾಸದ ಮೇಲೆ ದಾಳಿ ನಡೆಸಲು ತಲುಪಿದಾಗ ಭಾರಿ ಹೈಡ್ರಾಮಾ ನಡೆದಿದೆ.
ದಾಳಿಯ ಬಗ್ಗೆ ತಿಳಿದ ಶಾಸಕ ತನ್ನ ಮನೆಯ ಆವರಣ ಗೋಡೆಯನ್ನು ಹತ್ತಿ ಪರಾರಿಯಾಗಲು ಯತ್ನಿಸಿದರು. ಕೂಡಲೇ ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಬಂಧಿಸಿದರು . “ನಮ್ಮ ಅಧಿಕಾರಿಗಳು ಶಾಸಕರನ್ನು ಹತ್ತಿರದ ಪ್ರದೇಶದಲ್ಲಿ ಬೆನ್ನಟ್ಟಿ ಹಿಡಿದರು. ಈಗ, ನಮ್ಮ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿರ್ಭುಮ್ ಜಿಲ್ಲೆಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ಈ ದಾಳಿಗಳನ್ನು ಪ್ರಾರಂಭಿಸಲಾಯಿತು. ಹಗರಣಕ್ಕೆ ಸಂಬಂಧಿಸಿದ ಹಣಕಾಸಿನ ವಹಿವಾಟಿನ ಬಗ್ಗೆ ಬಿರ್ಭುಮ್ ಜಿಲ್ಲೆಯ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ಇಡಿ ತಂಡದೊಂದಿಗೆ ಸಹಾ ಅವರ ಮನೆಗೆ ಬಂದರು,” ಎಂದು ಅಧಿಕಾರಿ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಈ ಹಿಂದೆ ಸಹಾ ಅವರ ಪತ್ನಿಯನ್ನು ವಿಚಾರಣೆ ನಡೆಸಿತ್ತು.






