
ಪುತ್ತೂರು, ಸೆಪ್ಟೆಂಬರ್ 1, 2025:ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ, ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ನಡೆದಿರುವ ಅಪಪ್ರಚಾರ ಹಾಗೂ ಅವಹೇಳನವನ್ನು ಖಂಡಿಸಿ ಭವ್ಯ ಜನಾಗ್ರಹ ಸಭೆ ಜರುಗಿತು.
ಈ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಶ್ರೀ ಧರ್ಮಸ್ಥಳ ಸಂರಕ್ಷಣಾ ವೇದಿಕೆ ಆಯೋಜಿಸಿತ್ತು. ಸಭೆಯಲ್ಲಿ ಸುಮಾರು ೨,೦೦೦ಕ್ಕೂ ಅಧಿಕ ಮಂದಿ ಭಕ್ತರು, ಹಿಂದು ಮುಖಂಡರು, ದೇವಸ್ಥಾನಗಳ ಪ್ರತಿನಿಧಿಗಳು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ, ಶ್ರೀ ಕ್ಷೇತ್ರದ ಪರವಾಗಿ ಧ್ವನಿಯೆತ್ತಿದರು.
ಕಾರ್ಯಕ್ರಮದ ಆರಂಭ
ಸಭೆ ಪ್ರಾರಂಭಕ್ಕೂ ಮುನ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ರಮೇಶ್ ರೈ ಅವರ ನೇತೃತ್ವದಲ್ಲಿ 28 ಭಜನಾ ತಂಡಗಳು ಕುಣಿತ ಭಜನೆ ನಡೆಸಿ ಸಭೆಯ ಆತ್ಮೀಯ ವಾತಾವರಣಕ್ಕೆ ಚಾಲನೆ ನೀಡಿದರು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ :
“ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರಗಳು ಷಡ್ಯಂತ್ರದ ಭಾಗ. ತಲೆ ತಲಾಂತರಗಳಿಂದ ಅಣ್ಣಪ್ಪಸ್ವಾಮಿ ಹಾಗೂ ಶ್ರೀ ಮಂಜುನಾಥರ ನಂಬಿಕೆಯನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ಸಮಾಜದಲ್ಲಿ ಶಂಕೆ, ನಂಬಿಕೆಹೀನತೆ ಬೆಳೆಸುವ ಈ ದಾಳಿ ಎದುರಿಸಲು ನಾವು ಎಲ್ಲರೂ ಏಕವಾಗಿರಬೇಕು,” ಎಂದು ಕರೆ ನೀಡಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ :
“ಧರ್ಮಸ್ಥಳ ಕೇವಲ ದೇವಸ್ಥಾನವಲ್ಲ, ಅದು ಶೈಕ್ಷಣಿಕ ಕ್ರಾಂತಿ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಕೇಂದ್ರ. ಇಲ್ಲಿ ನಡೆಯುತ್ತಿರುವುದು ಸರಳ ಅಪಪ್ರಚಾರವಲ್ಲ, ಇದು ವೈಚಾರಿಕ ದಾಳಿ. ಜಿಹಾದಿ ಮನೋಭಾವದಿಂದ ಕ್ಷೇತ್ರದ ಭಕ್ತರನ್ನು ಕಡಿಮೆಮಾಡಿ, ಧರ್ಮಾಧಿಕಾರಿಗಳನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಯಾವತ್ತೂ ಅವಕಾಶ ಕೊಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ :
“ಧರ್ಮಸ್ಥಳವು ಸಾಮಾನ್ಯ ಜನರ ಜೀವನ ಪರಿವರ್ತನೆಗೆ ಕಾರಣವಾದ ಕ್ಷೇತ್ರ. ಇತ್ತೀಚಿನ ಘಟನೆಗಳಿಂದ ಜನರಲ್ಲಿ ಗೊಂದಲ ಉಂಟಾಗಿದೆ. ಸಾಮಾಜಿಕ ಜಾಲತಾಣಗಳು ಇದನ್ನು ಮತ್ತಷ್ಟು ಹೆಚ್ಚಿಸಿವೆ. ಸೌಜನ್ಯಳಿಗೆ ನಡೆದ ಅನ್ಯಾಯಕ್ಕೆ ಕಾನೂನು ಪ್ರಕಾರ ನ್ಯಾಯ ದೊರೆಯಬೇಕು. ಆದರೆ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ದುರುದ್ದೇಶಿತ ಪ್ರಚಾರವನ್ನು ಖಂಡಿಸಲೇಬೇಕು,” ಎಂದು ಹೇಳಿದರು
ಮನವಿ ಸಲ್ಲಿಕೆ
ಸಭೆಯ ಅಂತ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿ ವೇದಿಕೆ ವತಿಯಿಂದ ಪುತ್ತೂರು ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಗಣ್ಯರ ಉಪಸ್ಥಿತಿ
ವೇದಿಕೆಯಲ್ಲಿ ಜನಾಗ್ರಹ ಸಭೆ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಗರಸಭೆ ಸದಸ್ಯ ಜೀವಂಧರ್ ಜೈನ್, ಹಿರಿಯ ಹಿಂದೂ ಮುಖಂಡ ಡಾ. ಪ್ರಸಾದ್ ಭಂಡಾರಿ, ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನಿ ಎಲ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ, ಮಂಗಳೂರು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ.ನಾರಾಯಣ, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ.ಸುರೇಶ್ ಪುತ್ತೂರಾಯ, ಯು.ಪೂವಪ್ಪ, ವಿಶ್ವೇಶ್ವರ ಭಟ್ ಬಂಗಾರಡ್ಕ, ನ್ಯಾಯವಾದಿ ಕೇಶವ ಗೌಡ ಧರ್ಮಸ್ಥಳ, ಪದ್ಮನಾಭ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ರವೀಂದ್ರನಾಥ ಶೆಟ್ಟಿ ನುಳಿಯಾಲು, ಕೃಷ್ಣಪ್ರಸಾದ್ ಆಳ್ವ, ಪಿ.ಬಿ.ಶಿವಕುಮಾರ್, ಚಂದ್ರಶೇಖರ ಬಪ್ಪಳಿಗೆ, ನನ್ಯ ಅಚ್ಯುತ ಮೂಡೆತ್ತಾಯ, ಬೂಡಿಯಾರು ರಾಧಾಕೃಷ್ಣ ರೈ, ಲೋಕೇಶ್ ಹೆಗ್ಡೆ, ಮಾರಪ್ಪ ಶೆಟ್ಟಿ, ಶ್ರೀಕೃಷ್ಣ ಬೊಳ್ಳಿಲ್ಲಾಯ, ಅಶೋಕ್ ಪಡಿವಾಳ್, ಗೌರಿ ಬನ್ನೂರು, ಸುಭಾಶ್ ರೈ, ವಿನಯ ಸುವರ್ಣ, ಮುರಳೀಧರ ಹಸಂತಡ್ಕ, ಎ.ಕೆ.ಜಯರಾಮ ರೈ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ವಿಠಲ ರೈ ಬಾಲ್ಯೊಟ್ಟು, ನವೀನ್ ಕುಮಾರ್, ಅಜಿತ್ ಕುಮಾರ್ ಜೈನ್, ವಿ.ಕೆ.ಜೈನ್, ನರೇಂದ್ರ ಪಡಿವಾಳ್, ರಾಧಾಕೃಷ್ಣ ನಾಕ್, ಕೃಷ್ಣವೇಣಿ, ಉದಯ ಕುಮಾರ್, ಬಲರಾಮ ಆಚಾರ್ಯ ಉಪಸ್ಥಿತರಿದ್ದರು.





