
ದೆಹಲಿ:ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ವಿರುದ್ಧ ಹೊರಬಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಒಂದೊಂದೇ ಅಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಎನ್ಡಿಟಿವಿ ಪ್ರಕಟಿಸಿರುವ ಇತ್ತೀಚಿನ ವರದಿ ಪ್ರಕಾರ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಆತನ ಸಹಚರೆಯರೇ ಸಹಕಾರಿಯಾಗಿದ್ದರು ಎಂಬುದು ಬಹಿರಂಗವಾಗಿದೆ.
ಚೈತನ್ಯಾನಂದ ಸೂಚಿಸಿದ ಮಹಿಳೆಯರಿಗೆ, ಅವರೇನು ನಿರಾಕರಿಸಿದರೂ, ಆತನ ಜೊತೆ ಹೋಟೆಲ್ ಕೋಣೆಗೆ ಹೋಗುವಂತೆ ಮಹಿಳಾ ಸಹಾಯಕಿಯರು ಒತ್ತಾಯಿಸುತ್ತಿದ್ದರು. “ನನಗೆ ಋತುಸ್ರಾವವಾಗಿದೆ, ಅವರನ್ನು ಭೇಟಿಯಾಗುವ ಸ್ಥಿತಿಯಲ್ಲಿ ಇಲ್ಲ” ಎಂದು ಕೆಲವು ವಿದ್ಯಾರ್ಥಿನಿಯರು ಹೇಳಿದಾಗಲೂ, ಕಾರಣ ಹೇಳಬೇಡಿ ಎಂದು ಬೆದರಿಕೆ ಹಾಕುತ್ತಿದ್ದ ಶಬ್ದಗಳು ಆಡಿಯೋ ದಾಖಲೆಯಲ್ಲಿ ಪತ್ತೆಯಾಗಿವೆ ಎಂದು ವರದಿ ಹೇಳಿದೆ.
ಬಂಧನ ಮತ್ತು ಆರೋಪಗಳು
ದೆಹಲಿಯ ವಸಂತ್ ಕುಂಜ್ನಲ್ಲಿರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಮುಖ್ಯಸ್ಥರಾಗಿದ್ದ 67 ವರ್ಷದ ಚೈತನ್ಯಾನಂದ ಸರಸ್ವತಿ ಅವರನ್ನು ಕಳೆದ ತಿಂಗಳು ಬಂಧಿಸಲಾಗಿದೆ.
ಸಂಸ್ಥೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಗಂಭೀರ ಆರೋಪ ಹೊರಬಿದ್ದಿದ್ದು, ಅವರೊಂದಿಗೆ ಮಾಜಿ ಅಸೋಸಿಯೇಟ್ ಡೀನ್ ಶ್ವೇತಾ ಶರ್ಮಾ ಸೇರಿದಂತೆ ಮೂವರು ಮಹಿಳಾ ಸಹಚರೆಯರೂ ಬಂಧಿತರಾಗಿದ್ದಾರೆ. ಶ್ವೇತಾ ಶರ್ಮಾ ಅವರು ವಿದ್ಯಾರ್ಥಿನಿಯರನ್ನು ಹೋಟೆಲ್ ಕೋಣೆಗೆ ಕರೆದೊಯ್ಯಲು ಒತ್ತಾಯಿಸಿದ್ದಾರೆಯೆಂಬ ಆರೋಪವಿದೆ.
ಬಲವಂತದ ಬೆದರಿಕೆ ಮತ್ತು ಮನವೊಲಿಕೆ
ಮಹಿಳೆಯರು ಚೈತನ್ಯಾನಂದರ ಮನವಿಗೆ ಸ್ಪಂದಿಸದಿದ್ದರೆ ಅವರ ಶೈಕ್ಷಣಿಕ ದಾಖಲೆಗಳು ಮತ್ತು ಪದವಿಗಳನ್ನು ತಡೆಹಿಡಿಯುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು.
ಪಂಚತಾರಾ ಹೋಟೆಲ್ಗಳಲ್ಲಿ ನೆಲೆಸಿದ್ದ ಬಾಬಾ ಮತ್ತು ತಂಡ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದರು.
“ಬಾಬಾ ನಿನಗಾಗಿ ವಿಶೇಷ ಕೋಣೆಯನ್ನು ಕಾಯ್ದಿರಿಸಿದ್ದಾನೆ, ಅಲ್ಲಿ ಅವನೊಂದಿಗೆ ರಾತ್ರಿ ಕಳೆಯಬೇಕು” ಎಂದು ಹೇಳಿ ಒತ್ತಡ ಹೇರಲಾಗುತ್ತಿತ್ತು.
ವಿದ್ಯಾರ್ಥಿನಿಯರು ನಿರಾಕರಿಸಿದರೆ, ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲಾಗುತ್ತಿತ್ತು, ತಮ್ಮ ಖರ್ಚಿನಲ್ಲಿ ಕೋಣೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು.
ಈ ಒತ್ತಡದಿಂದಾಗಿ ಬಡ ಕುಟುಂಬದ ಹಿನ್ನೆಲೆಯ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕವಾಗಿ ತತ್ತರಿಸಬೇಕಾಯಿತು ಎಂದು ಹೇಳಲಾಗಿದೆ.
ಪೊಲೀಸರ ತನಿಖೆ
ಈ ಪ್ರಕರಣದಲ್ಲಿ ಹೊರಬಿದ್ದ ಕೆಲವು ಹೇಳಿಕೆಗಳು ನಕಲಿ ಆಗಿರುವ ಸಾಧ್ಯತೆಗಳಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಗಳನ್ನು ಬಯಲು ಮಾಡಲು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.






