
ಪುತ್ತೂರು: ಕಡಬ ತಾಲೂಕಿನ ಕಾಣಿಯೂರಿನ ಮಹಿಳೆಯೊಬ್ಬರ ಚಿನ್ನದ ಸರವನ್ನು ಪುತ್ತೂರು–ಕಾಣಿಯೂರು–ಬಾಳುಗೋಡು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಳ್ಳರು ಎಗರಿಸಿದ ಘಟನೆ ಅ.27ರಂದು ನಡೆದಿದೆ.
ಮಹಿಳೆ ಹಾಗೂ ಅವರ ಸಹೋದರಿಯರು ಅ.27ರಂದು ಸಂಜೆ 4.17ಕ್ಕೆ ಪುತ್ತೂರು ಬಸ್ ನಿಲ್ದಾಣದಿಂದ ಕಾಣಿಯೂರು–ಬಾಳುಗೋಡು ಮಾರ್ಗದ ಬಸ್ ಹತ್ತಿದ್ದರು. ಸಂಜೆ 4.45ರ ವೇಳೆಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಗೆ ಅವರ ಕುತ್ತಿಗೆಯಲ್ಲಿದ್ದ ಸುಮಾರು ರೂ.2 ಲಕ್ಷ ಮೌಲ್ಯದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಈ ಸಂಬಂಧ ಕುಟುಂಬಸ್ಥರು ಸವನೂರು ಹಾಗೂ ಕಾಣಿಯೂರು ಸುತ್ತಮುತ್ತ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ. ನಂತರ ಮಹಿಳೆಯ ಪುತ್ರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.:100/2025 ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಬಸ್ ನಿಲ್ದಾಣದಲ್ಲಿನ ಸಿ.ಸಿ. ಟಿ.ವಿ ಚಿತ್ರಣಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






