
ಪುತ್ತೂರು: ರಾಜ್ಯ ಸರ್ಕಾರ ತರಲಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆ–2025 ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ–2020ಕ್ಕೆ तಿದ್ದುಪಡಿ ಮಾಡುವ ನಿರ್ಧಾರವನ್ನು ವಿರೋಧಿಸಿ ಸಮಾಜಸೇವಕ ಅರುಣ್ ಕುಮಾರ್ ಪುತ್ತಿಲ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಸರ್ಕಾರ ಮುನ್ನಡೆಸುತ್ತಿರುವ ಈ ಮಸೂದೆಗಳು “ಹಿಂದೂ ಸಮಾಜವನ್ನು ಗುರಿಯಾಗಿಸಬಹುದಾದ ಕ್ರಮ” ಎಂದು ಅವರು ಆರೋಪಿಸಿದರು. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಾಜಕೀಯ ಲಾಭಕ್ಕಾಗಿ ಈ ವಿಧಾನಗಳನ್ನು ಬಳಸುತ್ತಿದೆ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಜಾನುವಾರು ಹತ್ಯೆ ಕಾಯ್ದೆಗೆ ತಿದ್ದುಪಡಿ ತರಲು ಮಾಡಿರುವ ಯೋಚನೆ ಅಕ್ರಮ ಗೋಸಾಗಾಟಕ್ಕೆ ಪರೋಕ್ಷವಾಗಿ ಅವಕಾಶ ಕಲ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. “ಅಕ್ರಮ ಗೋಸಾಗಾಟದಲ್ಲಿ ಸಿಕ್ಕಿಬಿದ್ದರೆ ಶಿಕ್ಷೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ವಶಪಡಿಸಿಕೊಳ್ಳಲಾದ ವಾಹನಗಳೂ ಸುಲಭವಾಗಿ ಬಿಡುಗಡೆ ಆಗುವ ಪರಿಸ್ಥಿತಿ ನಿರ್ಮಾಣವಾಗಬಹುದು,” ಎಂದು ಹೇಳಿದರು.
ಈ ಕ್ರಮಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಮಸೂದೆಯನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಅವರು ಆಗ್ರಹಿಸಿದರು. “ಸಚಿವ ಸಂಪುಟ ಮಸೂದೆ ಅಂಗೀಕರಿಸಿದರೂ , ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕೆಲವು ನಾಯಕರ ಮೌನ ವಿಷಾದನೀಯ,” ಎಂದರು.






