
ಧರ್ಮಸ್ಥಳ ಗ್ರಾಮದ ಕನ್ಯಾಡಿ–2ರಲ್ಲಿ ಇರುವ ಅರ್ಕ ಕನ್ವೆನ್ಸನ್ ಹಾಲ್ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದುದನ್ನು ಧರ್ಮಸ್ಥಳ ಠಾಣಾ ಪೊಲೀಸರು ಪತ್ತೆಹಚ್ಚಿದ್ದಾರೆ. ಜೋರಾಗಿ ಬೊಬ್ಬೆ ಹೊಡೆಯುವುದರಿಂದ ಅಸುಪಾಸಿನವರಿಗೆ ತೊಂದರೆ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, 13 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಡಿಸೆಂಬರ್ 22ರಂದು ರಾತ್ರಿ, ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀಕ್ಷಕ ರವಿ.ಬಿ.ಎಸ್ ಅವರಿಗೆ ಬಂದ ಮಾಹಿತಿಯಂತೆ, ಧರ್ಮಸ್ಥಳ ಠಾಣಾ ಪೊಲೀಸರೊಂದಿಗೆ ಅರ್ಕ ಕನ್ವೆನ್ಸನ್ ಹಾಲ್ಗೆ ತೆರಳಿ ಪರಿಶೀಲನೆ ನಡೆಸಿದಾಗ, ಹಾಲ್ನ ಮೊದಲನೇ ಮಹಡಿಯ ಪಾರ್ಟಿ ಹಾಲ್ನಲ್ಲಿ ಹಲವು ಜನರು ಸಂಘಟಿತರಾಗಿ ಹಣ ಗಳಿಸುವ ಉದ್ದೇಶದಿಂದ ಕಾನೂನುಬಾಹಿರವಾಗಿ ‘ಅಂದರ್–ಬಾಹರ್’ ಎಂಬ ಇಸ್ಪಿಟ್ ಆಟವನ್ನಾಡುತ್ತಿದ್ದುದು ಕಂಡುಬಂದಿದೆ.
ಈ ಸಂಬಂಧ ರಾಧಕೃಷ್ಣ (38), ವಚನ್ ಅಜಿಕುರಿ, ಅವಿನಾಶ್ ಶೆಟ್ಟಿ, ನಿಧೀಶ್ (30), ಅನ್ವರ್ (43), ಮಹಮ್ಮದ್ ಶಫಿಕ್ (38), ಇಬ್ರಾಹೀಂ (40), ಪರಮೇಶ್ (57), ಶರೀಫ್ (38), ಉಬೈದುಲ್ಲಾ (43), ಪರಮೇಶ್ವರಪ್ಪ (56), ಅಶೋಕ್ (48) ಹಾಗೂ ಗಾಡ್ವಿನ್ ಗೋವಿಯಸ್ (60) ಸೇರಿದಂತೆ ಇತರರನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮ ಜೂಜಾಟಕ್ಕೆ ಬಳಸಲಾಗುತ್ತಿದ್ದ ಇಸ್ಪಿಟ್ ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 81/2025ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79, 80 ಹಾಗೂ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 112 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.






