
ಪುತ್ತೂರು: ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಡಿಮೆಗೊಳಿಸುವ ಕ್ರಮ ಕೈಗೊಂಡಿದ್ದು, ಇದರ ಪರಿಣಾಮ ದೇಶದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಆರೋಪಿಸಿದರು.
ಕಾವಿನಿಂದ ಆರಂಭಗೊಂಡ ‘ಮನರೇಗಾ ಬಚಾವ್ ಸಂಗ್ರಾಮ’ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಿಂದ ದೇಶದ ಕೋಟ್ಯಂತರ ಬಡವರಿಗೆ ಉದ್ಯೋಗ ಮತ್ತು ಆದಾಯ ಲಭಿಸಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಪರೋಕ್ಷವಾಗಿ ಯೋಜನೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದರು.
“ಮನರೇಗಾ ಯೋಜನೆಗೆ ಕಡಿವಾಣ ಹಾಕುವ ಮೂಲಕ ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆಗೆ ಧಕ್ಕೆ ತರುವ ಕೆಲಸ ನಡೆದಿದೆ. ಜಿಲ್ಲೆಯಲ್ಲಿ ಇದುವರೆಗೆ ಈ ಯೋಜನೆಯಡಿ ಸುಮಾರು ₹260 ಕೋಟಿ ಕೂಲಿ ನೀಡಲಾಗಿದೆ. ಹೊಸ ನಿಯಮಾವಳಿಗಳಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಮತ್ತು ಕೂಲಿ ವಿತರಣೆಗೆ ತೊಂದರೆ ಉಂಟಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ನಿರ್ಧಾರದ ವಿರುದ್ಧ ಪಕ್ಷಾತೀತವಾಗಿ ದೇಶಾದ್ಯಂತ ಹೋರಾಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಪಾದಯಾತ್ರೆ ಕಾವಿನಿಂದ ಕುಂಬ್ರವರೆಗೆ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾವು ಹೇಮನಾಥ ಶೆಟ್ಟಿ, ಎಂ.ಎಸ್. ಮಹಮ್ಮದ್, ಇನಾಯತ್ ಆಲಿ, ಐವನ್ ಡಿಸೋಜಾ, ಬಿ. ರಮಾನಾಥ ರೈ, ಕೃಷ್ಣ ಪ್ರಸಾದ್ ಆಳ್ವ, ಫಾರೂಕ್ ಬಾಯಬ್ಬೆ, ಯು.ಟಿ. ತೌಸೀಪ್, ನಿಹಾಲ್ ಪಿ. ಶೆಟ್ಟಿ, ಅನ್ವರ್ ಖಾಸಿಂ, ಶ್ರೀ ಪ್ರಸಾದ್ ಪಾಣಾಜೆ, ಚಂದ್ರಪ್ರಭಾ ಗೌಡ, ಫಾರೂಕ್ ಪೆರ್ನೆ, ಅಖಿಲ್ ಕಲ್ಲಾರೆ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು







