ಎದುರಾಳಿ ಗುಂಪು ತಪ್ಪು ಅರ್ಥ ಮಾಡಿಕೊಂಡಿದ್ದೇ ಕಾಂಗ್ರೆಸ್ ಯುವ ಮುಖಂಡನ ಕೊಲೆಗೆ ಕಾರಣ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.
ಶಶಿಕುಮಾರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, “ಈ ಕೊಲೆಗೆ ವೈಯಕ್ತಿಕ ದ್ವೇಷವೇ ಪ್ರಮುಖ ಕಾರಣ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದರು.
ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಮೊಹ್ಮದ್ ಷಾ ಹಾಗೂ ಫೈರೋಜ್ ಪಠಾಣ್ ನಡುವೆ ದೀರ್ಘಕಾಲದ ವೈಯಕ್ತಿಕ ಸಂಘರ್ಷವಿತ್ತು. ಫೈರೋಜ್ ತನಗೆ ಪದೇ ಪದೇ ಕಿರಿಕಿರಿ ನೀಡುತ್ತಿದ್ದ ಎಂದು ಆರೋಪಿ ಮೊಹ್ಮದ್ ಷಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇವರಿಬ್ಬರ ನಡುವಿನ ಜಗಳ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಮೊಹ್ಮದ್ ಷಾ, ಉಳಿದವರನ್ನು ಸೇರಿಸಿಕೊಂಡು ಫೈರೋಜ್ನನ್ನು ಮಟ್ಟಹಾಕಲು ಸ್ಕೆಚ್ ಹಾಕಿದ್ದ ಎಂದರು.
ಫೈರೋಜ್ ಪಠಾಣ್ ಅವರಿಗೆ ಶೀಘ್ರದಲ್ಲೇ ಮದುವೆ ನಿಶ್ಚಯವಾಗಿತ್ತು. ಮದುವೆಯ ಕೆಲಸಗಳಿಗಾಗಿ ಅವರು ಗೆಳೆಯರನ್ನು ಮತ್ತು ಹುಡುಗರನ್ನು ಕರೆದುಕೊಂಡು ಓಡಾಡುತ್ತಿದ್ದರು. ಆದರೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಆರೋಪಿಗಳು, ಫೈರೋಜ್ ತನ್ನ ಮೇಲೆ ದಾಳಿ ಮಾಡಲು ಹುಡುಗರನ್ನು ಒಗ್ಗೂಡಿಸುತ್ತಿದ್ದಾನೆ ಎಂದು ಭಾವಿಸಿದ್ದರು. ಹೀಗಾಗಿ ಕಳೆದ ಹಲವು ದಿನಗಳಿಂದ ಫೈರೋಜ್ನ ಪ್ರತಿ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಹಂತಕರು, ಮನೆಯಲ್ಲಿ ಪುರುಷರು ಇಲ್ಲದ ಸಮಯ ನೋಡಿ ದಾಳಿ ನಡೆಸಿದ್ದಾರೆ.
ಮೊಹ್ಮದ್ ಷಾ (ಮುಖ್ಯ ಆರೋಪಿ), ಸೈಯದ್ಗೌಸ್ ಜಾನಿಷಾ, ಫರವೇಜ್ ಆಲಂ ಮಹಲ್ದಾರ, ಸಮೀರ್ ಅಹ್ಮದ್ ಮಕಾಂದಾರ್, ಸದ್ದಾಂಹುಸೇನ್ ನವಲಗುಂದ, ಖೈಫ್ ರೆಹಮಾನ್ಬಾಯಿ, ಅರಬಾಜ್ ಹಂಚಿನಾಳ, ಸೋಹಿಲ್ಖಾನ್ ಹಾಲಭಾವಿ, ಮಕ್ತುಂ ಸೊಗಲದ ಬಂಧಿತ ಆರೋಪಿಗಳಾಗಿದ್ದು ಇವರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದರು.
ಪೊಲೀಸರು ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. “ನಾವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.














