ವಿಟ್ಲ: ಕಂಬಳಬೆಟ್ಟು ಸಮೀಪದ ಅಮೈ ಪ್ರದೇಶದಲ್ಲಿ ಸುಡುಮದ್ದು ತಯಾರಿಕೆ ನಡೆಸುತ್ತಿದ್ದರೆಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಸುಮಾರು 1.9 ಕೆ.ಜಿ. ತೂಕದ ಸಂಶಯಾಸ್ಪದ ಸ್ಪೋಟಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಅವರು ತಮ್ಮ ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಸುಡುಮದ್ದಿಗೆ ಅಗತ್ಯವಿರುವ ಸ್ಪೋಟಕ ಸಾಮಗ್ರಿಗಳನ್ನು ಶೇಖರಿಸಿಕೊಂಡಿದ್ದರೆಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉಪ ನಿರೀಕ್ಷಕ ಬಿ.ಎಸ್. ನಾಯಕರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.
ತಪಾಸಣೆಯ ವೇಳೆ ಸ್ಪೋಟಕದಂತಿರುವ ವಸ್ತು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 93/2026 ರಂತೆ ಸ್ಪೋಟಕ ಕಾಯ್ದೆ 1884ರ ಕಲಂ 9ಬಿ, ಸ್ಪೋಟಕ ವಸ್ತುಗಳ ಕಾಯ್ದೆ 1908ರ ಕಲಂ 5 ಹಾಗೂ ಬಿಎನ್ಎಸ್ 2023ರ ಕಲಂ 288 ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.














