ಪುತ್ತೂರು, ಏ.22: ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಎಂಬ ಕಾಲೇಜು ವಿದ್ಯಾರ್ಥಿಗೆ ಪುತ್ತೂರಿನಲ್ಲಿ ಪರಿಚಿತರಿಂದ ಹಲ್ಲೆ ನಡೆಸಿದ ಪ್ರಕರಣ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪೊಲೀಸ್ ಮಾಹಿತಿಯಂತೆ, ಆದಿಲ್ ಹುಸೈನ್ ಅವರು ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಏಪ್ರಿಲ್ 22ರಂದು ಸಂಜೆ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಅವರೊಂದಿಗೆ ಪುತ್ತೂರು ಕಸಬಾ ಗ್ರಾಮದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿದ್ದರು. ಈ ವೇಳೆ ಪರಿಚಿತ ಆರೋಪಿಗಳಾದ ಬಿ.ಕೆ. ಮೊಯಿನುದ್ದೀನ್, ಮೊಹದ್ ಹಾಗೂ ಇತರ ಐವರು ಸ್ಥಳಕ್ಕೆ ಬಂದು ಹಲ್ಲೆ ನಡೆಸಿದರೆಂದು ದೂರಲಾಗಿದೆ.
ಹಲ್ಲೆಯ ಕುರಿತು ಪ್ರಶ್ನಿಸಿದ ಸ್ನೇಹಿತರಿಗೆ ಆರೋಪಿಗಳು ಬೆದರಿಕೆ ಹಾಕಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಗಲಾಟೆ ಬಿಡಿಸಲು ಮುಂದಾದಾಗ ಅವ್ಯಾಚವಾಗಿ ಬೈದು ಜೀವಬೆದರಿಕೆ ಒಡ್ಡಿ ಆರೋಪಿಗಳು ತೆರಳಿದರೆಂದು ತಿಳಿದುಬಂದಿದೆ. ಗಾಯಗೊಂಡ ಆದಿಲ್ ಹುಸೈನ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ನಡುವಿನ ಗಲಾಟೆಯನ್ನು ಪಿರ್ಯಾದಿದಾರರು ಬಿಡಿಸಿದ್ದ ಹಿನ್ನೆಲೆ ಈ ಹಲ್ಲೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026ರಡಿ ಬಿಎನ್ಎಸ್ 2023ರ ಕಲಂಗಳು 189(2), 191(2), 191(3), 352, 115(2), 118(1), 351(2) ಮತ್ತು 190 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.














