ಎರಡು ಕುಟುಂಬಗಳಲ್ಲಿ ಮದುವೆ (Marriage) ಸಂಭ್ರಮ ಮನೆ ಮಾಡಿತ್ತು. ಹೊಸ ಬಾಳು ಕಟ್ಟುವ ಆಸೆಯಲ್ಲಿದ್ದ ನವಜೋಡಿ ಬಾಳಲ್ಲಿ ವಿಧಿ ಇದೆಂಥಾ ಚೆಲ್ಲಾಟವಾಡಿದೆ. ಮದುವೆಗೆ 11 ದಿನ ಬಾಕಿ ಇರುವಾಗಲೇ ಹಸೆಮಣೆ ಏರಬೇಕಿದ್ದ ಯುವಕ ಯಮನಪಾದ ಸೇರಿದ್ದಾನೆ. ಹೊಸ ಬಟ್ಟೆ ತೊಟ್ಟು, ಕಾರು ಹತ್ತಿ, ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ಮಾಡಿಸಲು ಹುಡುಗಿಯನ್ನು ಕರೆದುಕೊಂಡು ಬರಲು ಹೋದ 29 ವರ್ಷದ ಮನು ಅಪಘಾತಕ್ಕೆ ಬಲಿಯಾಗಿದ್ದಾನೆ.
ಹಸೆಮಣೆ ಏರಬೇಕಿದ್ದವನು ಮಸಣಕ್ಕೆ
ವಿಧಿಯಾಟ ಅನ್ಬೇಕೋ? ದುರಾದೃಷ್ಟ ಅನ್ಬೇಕೋ? ಮನು ಸಾವಿನಿಂದ ಮದುವೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಸೂತಕ ಛಾಯೆ ಆವರಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಕಾರು ಅಪಘಾತ ಸಂಭಿಸಿದ್ದು, ಈ ಅಪಘಾತದಲ್ಲಿ ಬೇಲೂರಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರೀವೆಡ್ಡಿಂಗ್ ಶೂಟ್ ಸಡಗರಕ್ಕೆ ಕೊಳ್ಳಿ
ಹಸೆಮಣೆ ಏರಬೇಕಿದ್ದ ವರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಎರಡೂ ಕುಟುಂಬಕ್ಕೂ ದೊಡ್ಡ ಆಘಾತವಾಗಿದೆ. ಮೇ 10 ರಂದು ಮೃತ ಮನುಗೆ ಮದುವೆ ನಿಶ್ಚಯವಾಗಿತ್ತು. ಇನ್ನೇನು ಕೆಲ ದಿನ ಇರುವಾಗಲೇ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಲು ಹುಡುಗ-ಹುಡುಗಿ ಮುಂದಾಗಿದ್ದಾರೆ. ಅದರಂತೆ ಇಂದು ಬೆಳಗ್ಗೆ ವಧುವನ್ನ ಕರೆದುಕೊಂಡು ಬರಲೆಂದೇ ಮನು ಕಾರಿನಲ್ಲಿ ತೆರಳಿದ್ದು, ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ
ಬೆಳಗಿನ ಸಮಯದಲ್ಲಿ ವೇಗವಾಗಿ ಬರ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ ಮನು ಸಾವನ್ನಪ್ಪಿದ್ದಾನೆ. ಅಪಘಾತದ ತೀವ್ರತೆ ಹೇಗಿತ್ತು ಅಂದ್ರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇನ್ವಿಟೇಷನ್ ನೋಡಿ ಯುವಕನ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.














