ಬೆಳ್ತಂಗಡಿ, ಜೂ. 5: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಧರ್ಮಸ್ಥಳ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಜಾನುವಾರು ಸಾಗಾಟದ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕ ಸಮರ್ಥ ಆರ್. ಗಾಣಿಗೇರ ನೇತೃತ್ವದ ತಂಡ ಸೋಮಂತಡ್ಕದ ಮಂಜುಶ್ರೀ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿತು. ಈ ವೇಳೆ ತೋಟತ್ತಾಡಿ ನಿವಾಸಿ ಅನಿಲ್ ಪಿ. (34) ಎಂಬಾತ ಯಾವುದೇ ಪೂರ್ವಾನುಮತಿ ದಾಖಲೆಗಳಿಲ್ಲದೆ ಪಿಕ್ಅಪ್ ವಾಹನದಲ್ಲಿ ಜಾನುವಾರೊಂದನ್ನು ಸಾಗಿಸುತ್ತಿರುವುದು ಪತ್ತೆಯಾಯಿತು.
ಪೊಲೀಸರ ವಿಚಾರಣೆಯಲ್ಲಿ, ಜಾನುವಾರನ್ನು ರಾಘವೇಂದ್ರ ಭಟ್ (45) ಅವರಿಂದ ಖರೀದಿಸಿದ್ದು, ಮಾಂಸಕ್ಕಾಗಿ ತೋಮಸ್ ತೋಟತ್ತಾಡಿ (30) ಹಾಗೂ ಕಕ್ಕಿಂಜೆ ನಿವಾಸಿ ಕಬೀರ್ (28) ಅವರೊಂದಿಗೆ ಸೇರಿ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ–2020ರ ಕಲಂ 5, 7 ಹಾಗೂ 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






