ಪುತ್ತೂರು, ಜೂ. 7: ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ), ಸಿಟಿಗುಡ್ಡೆ ಪುತ್ತೂರು ಹಾಗೂ ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆ ವತಿಯಿಂದ 73ನೇ ಸಹಾಯ ಯೋಜನೆಯಡಿ ಮೇ ತಿಂಗಳ ಸಹಾಯಧನವನ್ನು ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ವಿತರಿಸಲಾಯಿತು.
ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕ ನಿವಾಸಿಗಳಾದ ಗಣೇಶ್ ಮತ್ತು ಗೌತಮಿ ದಂಪತಿಯ 10 ವರ್ಷದ ಪುತ್ರಿ ಸಾನ್ವಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಈಗಾಗಲೇ ಸುಮಾರು ₹6 ಲಕ್ಷ ವೆಚ್ಚವಾಗಿದೆ. ಪೈಂಟಿಂಗ್ ಕೆಲಸ ಮಾಡುತ್ತಿರುವ ಗಣೇಶ್ ಅವರಿಗೆ ಮುಂದಿನ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಅವರು ಸಂಸ್ಥೆಗೆ ಮನವಿ ಸಲ್ಲಿಸಿ ನೆರವು ಕೋರಿದ್ದರು.
ಇದಕ್ಕೆ ಸ್ಪಂದಿಸಿದ ಮಂಡಳಿಯು ತನ್ನ ಸಹೃದಯ ದಾನಿಗಳಿಂದ ಸಂಗ್ರಹಿಸಿದ ₹35,200 ಸಹಾಯಧನವನ್ನು ಜೂನ್ 7ರಂದು ಸಾನ್ವಿಯ ತಂದೆ ಗಣೇಶ್ ಅವರಿಗೆ ಹಸ್ತಾಂತರಿಸಿತು.
ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಡಾ. ಶಾಂತಾ ಪುತ್ತೂರು, ಶಿಕ್ಷಕರಾದ ನವೀನ್ ನಗರ (ಸಿಟಿಗುಡ್ಡೆ), ಮನೋಹರ್ ಹಾಗೂ ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು.






