ಪುತ್ತೂರು: ವಾರದ ಹಿಂದೆಯೇ ವೃದ್ಧ ಪತಿ ಮನೆಯೊಳಗೆ ಮೃತಪಟ್ಟಿದ್ದರೂ ಅನಾರೋಗ್ಯ ಪೀಡಿತ ಪತ್ನಿಗೆ ಗೊತ್ತಾಗದ ಕಾರಣ ಕೊಳೆತುಹೋಗಿದ್ದ ಮೃತದೇಹಕ್ಕೆ ಸೆ. 18ರಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಮುಕ್ತಿ ನೀಡಿದರು.

ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ನಿವಾಸಿ ರಮೇಶ್‌ ರಾವ್‌ (70) ಮೃತಪಟ್ಟವರು. ಮಕ್ಕಳಿಲ್ಲದ ದಂಪತಿ ಮಾತ್ರ ಮನೆಯಲ್ಲಿದ್ದರು. ಪತ್ನಿ ತೀವ್ರ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು ಪತಿಯೇ ಮನೆಯ ದೈನಂದಿನ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಡುಗೆ ಮಾಡಿ ಪತ್ನಿಗೆ ಉಣಬಡಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರು ಮೃತಪಟ್ಟಿದ್ದು, ಆದರೆ ಈ ಸಂಗತಿ ಗೊತ್ತಾಗದ ಪತ್ನಿ ಮನೆಯೊಳಗೇ ಇದ್ದು ಆಹಾರ ಇಲ್ಲದೆ ಬಳಲಿದ್ದರು.

ಬುಧವಾರ ಬೆಳಗ್ಗೆ ಹತ್ತಿರದ ಮನೆಗೆ ಬಂದು ಊಟ ನೀಡುವಂತೆ ಕೇಳಿದ್ದರು. ಆಗ ಆ ಮನೆಯವರು ಪರಿಶೀಲಿಸಿದಾಗ ಮನೆ ಯಜಮಾನ ಮೃತಪಟ್ಟಿರುವುದು ಬೆಳಕಿಗೆ ಬಂತು. ಮೃತದೇಹ ಕೊಳೆತು ನಾರುತ್ತಿತ್ತು. ಸಂಪ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ನೆರವು ವಿಹಿಂಪ ಮತ್ತು ಬಜರಂಗದಳದ ಸ್ಥಳೀಯ ಕಾರ್ಯಕರ್ತರ ಮೂಲಕ ಬಲ್ನಾಡಿನ ವಿನಾಯಕ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ ನವರ ಆ್ಯಂಬುಲೆನ್ಸ್‌ನಲ್ಲಿ ಬಲ್ನಾಡ್‌ ಗ್ರಾ.ಪಂ. ಸದಸ್ಯರಾದ ಪರಮೇಶ್ವರಿ ಬಬ್ಬಿಲಿ, ಕಿರಣ್‌ ಕುಮಾರ್‌ ಬಲ್ನಾಡ್‌ ನೇತೃತ್ವದಲ್ಲಿ ಮೃತದೇಹವನ್ನು ಪುತ್ತೂರು ಮಡಿವಾಳಕಟ್ಟೆ ಶ್ಮಶಾನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು

Leave a Reply

Your email address will not be published. Required fields are marked *

Join WhatsApp Group
error: Content is protected !!